ಶನಿವಾರ, ಏಪ್ರಿಲ್ 4, 2015

ಮಾಧ್ಯಮ- ಪೂರ್ವಾಗ್ರಹ ಮತ್ತು ನೈತಿಕತೆ





     ಮಂಜುಳಾ ಮಾಸ್ತಿಕಟ್ಟೆ, ನ್ಯೂಸ್ ಆ್ಯಂಕರ್, ರಾಜ್‍ ನ್ಯೂಸ್ ಕನ್ನಡ, ಬೆಂಗಳೂರು
“ನಿಕ್ಷೇಪ 2014-15” ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ ಪಡೆದ ಲೇಖನ

ಮಾಧ್ಯಮ ಎಂಬುದು ಪೂರ್ವಾಗ್ರಹ ಮತ್ತು ನೈತಿಕತೆ ಎಂಬ ಎರಡು ಅಂಚಿನ ಕತ್ತಿಯನ್ನು ತನ್ನಲ್ಲಿ ಹುಡುಗಿಸಿಟ್ಟುಕೊಂಡಿರುವ ಅಪೂರ್ವವಾದ ಕ್ಷೇತ್ರ. ಇಲ್ಲಿದ್ದಷ್ಟು ಪೂರ್ವಾಗ್ರಹಗಳು ಹಾಗೂ ನೈತಿಕ ಪ್ರಜ್ಞೆಯ ಕನವರಿಕೆಗಳು ಜಗತ್ತಿನ ಇನ್ಯಾವುದೇ ಉದ್ಯಮದಲ್ಲಿ, ಸಮುದಾಯದಲ್ಲಿ ಕಂಡುಬರುವುದಿಲ್ಲ. ವೈಯುಕ್ತಿಕ ನೆಲೆಯಿಂದ ಆರಂಭವಾಗಿ, ವೃತ್ತಿಪರ ನೀತಿಗಳವರೆಗೆ ಪೂರ್ವಾಗ್ರಹಗಳು ಇಲ್ಲಿ ಕೆಲಸ ಮಾಡುತ್ತವೆ. ಅಷ್ಟೆ ತೀವ್ರವಾಗಿ ನೈತಿಕ ಪ್ರಜ್ಞೆ ಎಲ್ಲವಕ್ಕೂ ಒಂದು ತಾತ್ವಿಕ ಸಮಜಾಯಿಷಿಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ.

ಇದೊಂದು ಅತ್ಯಂತ ಸಂಕೀರ್ಣವಾದ, ಕಳೆದ ಕೆಲವು ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ಚರ್ಚೆಯಲ್ಲಿರುವ ವಿಚಾರ. ಕಾಲ ಬದಲಾಗುತ್ತಿದ್ದಂತೆ, ತಂತ್ರಜ್ಞಾನ ಬೆಳೆಯುತ್ತ ಬರುತ್ತಿದ್ದಂತೆ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಾಣಿಸಿಕೊಂಡವು. ಅವುಗಳು ಸುದ್ದಿಯ ಸ್ವರೂಪ, ತಲುಪುವ ರೀತಿ, ಸಂವಹನ ಕ್ರಮ ಹೀಗೆ ನಾನಾ ಆಯಾಮಗಳಲ್ಲಿ ಆದಂತಹ ಬದಲಾವಣೆಗಳು. ಇಂತಹ ಬದಲಾವಣೆಗಳು ಆದಂತೆಲ್ಲ, ಅವುಗಳು ಹೊರಡಿಸುವ ಧ್ವನಿಯಲ್ಲೂ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕಾದ ಅನಿರ್ಯಾತೆ ಎದುರಾಯಿತು. ಇಂತಹ ಸಮಯದಲ್ಲಿ, ಅಂದರೆ, 90ರ ದಶಕದಲ್ಲಿ ಮಾಧ್ಯಮಗಳ ನೈತಿಕತೆ ಕುರಿತು ಜಾಗತಿಕ ಸಂಸ್ಥೆಗಳು ನೈತಿಕತೆಯ ವಿಚಾರದಲ್ಲಿ ನಿಯಮಾವಳಿಗಳನ್ನು ರೂಪಿಸಲು ಮುಂದಾದವು. ಆದರೆ, ಅದರಲ್ಲಿ ಕೆಲವು ಪೂರ್ವಾಗ್ರಹಗಳು ಕೆಲಸ ಮಾಡಿವೆ ಎಂಬ ಕಾರಣಕ್ಕೆ, ಈ ಕರಡು ಮಾಧ್ಯಮ ನೈತಿಕತೆಯ ಪರ ಮತ್ತು ವಿರೋಧದ ದನಿಗಳು ಕೇಳಿಬಂದವು. ಅಲ್ಲಿಂದ ಆಚೆಗೆ ನಿರ್ದಿಷ್ಟವಾಗಿ ಮಾಧ್ಯಮಗಳ ನೈತಿಕತೆ ಎಂಬುದು ಲಿಖಿತ ರೂಪ ಇಲ್ಲ. ಆದರೆ, ಪರಿಭಾವಿಸುವಿಕೆಯಲ್ಲಿ ಪ್ರತಿಯೊಂದು ಮಾಧ್ಯಮವೂ ತನ್ನದೇ ಆದ ನೈತಿಕ ಮಿತಿಗಳನ್ನು ದಾಟಬಾರದು ಎಂಬುದನ್ನು ಜನಸಾಮಾನ್ಯರೂ ಒಪ್ಪುತ್ತಾರೆ. ಹೀಗಾಗಿ, ಮಾಧ್ಯಮ ಸಂಸ್ಥೆಗಳು ತಮ್ಮನ್ನು ತಾವು ನಿರ್ಭಂಧಿಸಿಕೊಳ್ಳುವ ಅಗತ್ಯ ಇತ್ತು ಮತ್ತು ಇದೆ.

ಈ ಕುರಿತು ಇನ್ನಷ್ಟು ಆಳಕ್ಕಿಳಿಯುವ ಮುನ್ನ ಕೆಲವೊಂದು ವಾಸ್ತವದ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ನ್ಯೂಸ್‍ ರೂಂ ಗಜಿಬಿಜಿಯ ನಡುವೆ ಪುಟ್ಟ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವಾದ ಸುದ್ದಿ ಬರುತ್ತದೆ. ಬ್ರೇಕಿಂಗ್‍ ನ್ಯೂಸ್ ಧಾವಂತ ಹೇಗಿರುತ್ತದೆ ಎಂದರೆ, ಬಾಲಕಿಯ ಅತ್ಯಾಚಾರದ ಸುದ್ದಿ ನಮ್ಮಲ್ಲಿಯೇ ಮೊದಲು ‘ಆನ್ ಏರ್’ ಆಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗಾಗಿ, ಸುದ್ದಿ ಬಂದ ಕೆಲವೇ ಕ್ಷಣಗಳಲ್ಲಿ ಅದು ಟಿವಿ ಪರದೆಯ ಮೇಲೆ ಮೊದಲು ಅಕ್ಷರ ರೂಪದಲ್ಲಿ, ನಂತರ ಆಕೆ ಭಾವಚಿತ್ರ ಸಮೇತ ಭಿತ್ತರಗೊಳ್ಳುತ್ತದೆ. ನಂತರ ಸ್ಥಳದಲ್ಲಿರುವ ವರದಿಗಾರನಿಗೆ ಕರೆ ಮಾಡಿ, ಇನ್ನಷ್ಟು ಮಾಹಿತಿ ನೀಡುಲು ಕೋರಲಾಗುತ್ತದೆ. ಆತ ಅತ್ಯಾಚಾರ ನಡೆದ ಸ್ಥಳ, ದಿನಾಂಕ ಮತ್ತಿತರ ಮಾಹಿತಿ ಜತೆಗೆ ಆಕೆಯ ಹೆಸರು, ವಿಳಾಸ ಎಲ್ಲವನ್ನೂ ತಿಳಿಸಿಬಿಡುತ್ತಾನೆ. ಕೊನೆಗೆ, ಅದು ಚಾನಲ್‍ನ ಉನ್ನತ ಹುದ್ದೆಯಲ್ಲಿ ಇದ್ದವರ ಕಣ್ಣಿಗೆ ಬಿದ್ದು, ಅವರಿಗೆ ಆ ಕ್ಷಣದಲ್ಲಿ ಅರ್ಥವಾದರೆ, ಸದರಿ ಸುದ್ದಿಗೆ ಬ್ರೇಕ್‍ ನೀಡಿ ಮುಂದಿನ ಸುದ್ದಿಗೆ ಹೋಗುತ್ತಾರೆ. ಅಷ್ಟೊತ್ತಿಗೆ ಮಾಧ್ಯಮವಾಗಿ ಪಾಲಿಸಬೇಕಾದ ನೈತಿಕ ವಿಚಾರವೊಂದು ಗಾಳಿಗೆ ತೂರಿ ಹೋಗಿರುತ್ತದೆ. ಇದು ಸದ್ಯದ ಕನ್ನದ ನ್ಯೂಸ್‍ ಚಾನಲ್‍ಗಳಲ್ಲಿ ಕಂಡು ಬರುತ್ತಿರುವ ನಿತ್ಯದ ಪರಿಪಾಟಲುಗಳು. ಹಾಗಂತ ಸುದ್ದಿ ನೀಡಿದ ವರದಿಗಾರನಿಗೆ ಕಾಳಜಿ ಇಲ್ಲ ಅಂತ ಅನ್ನಲೂ ಸಾಧ್ಯವಿಲ್ಲ. ಆದರೆ, ನಾವೇ ಮೊದಲು ನೀಡಿದರೆ, ಸುದ್ದಿ ರೇಟಿಂಗ್‍ನಲ್ಲಿ ನಾವೇ ಮುಂದೆ ಇರುತ್ತೇವೆ ಎಂಬ ಧಾವಂತದ ಪೂರ್ವಾಗ್ರಹವೊಂದು ಆತನ ವೃತ್ತಿನಿಷ್ಟ ವರದಿಗಾರಿಕೆಯಿಂದ ಹೆಜ್ಜೆ ಹಿಂದಿಡುವಂತೆ ಮಾಡಿರುತ್ತದೆ.

ನೈತಿಕತೆ ಹಾಗೂ ಪೂರ್ವಾಗ್ರಹಳು ಪ್ರತಿ ದಿನ ಮಾಧ್ಯಮಗಳ ಕೆಲಸದಲ್ಲಿ ಅಭಿವ್ಯಕ್ತಗೊಳ್ಳುತ್ತವೆ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಇದನ್ನು ಇನ್ನಷ್ಟು ಆಳದಲ್ಲಿ ಅರ್ಥಮಾಡಿಕೊಳ್ಳುವ ಮುನ್ನ ಇಂದಿನ ಮಾಧ್ಯಮಗಳು ಸಾಗುತ್ತಿರುವ ಹಾದಿಯ ಕುರಿತು ಮೊದಲು ಗಮನ ಹರಿಸಬೇಕಿದೆ. ಸಾಮಾನ್ಯವಾಗಿ ಜಾಗತಿಕ ಮಾಧ್ಯಮಗಳು ಹಾಗೂ ರಾಷ್ಟ್ರೀಯ ನ್ಯೂಸ್‍ ಮೀಡಿಯಾಗಳಿಗೆ ಹೋಲಿಸಿದರೆ ಸ್ಥಳೀಯ ಸುದ್ದಿ ವಾಹಿನಿಗಳ ಪ್ರಭಾವ ಜನಸಾಮಾನ್ಯರ ಮಟ್ಟದಲ್ಲಿ ಹೆಚ್ಚಿರುತ್ತದೆ. ಇವುಗಳನ್ನು ನೀತಿ ನಿರೂಪಕರು, ಜನ ಪ್ರತಿನಿಧಿಗಳು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಇರುವವರು ನೋಡುತ್ತಾರೆ, ಆದರೆ ಜನರು ಇದರ ಗ್ರಾಹಕರಾಗಿರುತ್ತಾರೆ. ಹೀಗಾಗಿಯೇ, ಸ್ಥಳೀಯ ಸುದ್ದಿ ವಾಹಿನಿಗಳು ಅಥವಾ ಪ್ರಾದೇಶಿಕ ಭಾಷೆಯ ಪತ್ರಿಕೆಗಳು ಸಾಮಾನ್ಯ ಜನರ ಅಭಿರುಚಿಯನ್ನು ಹೆಚ್ಚು ಗಮನದಲ್ಲಿ ಇಟ್ಟುಕೊಂಡು ತಮ್ಮನ್ನು ತಾವು ಸ್ಫರ್ದೆಯಲ್ಲಿ ಉಳಿಯಲು  ಪ್ರಯತ್ನಿಸುತ್ತವೆ. ಎಲ್ಲವೂ ಮಾರುಕಟ್ಟೆ ಕೇಂದ್ರಿತವಾಗಿರುವ ಇವತ್ತು ಮಾಧ್ಯಮ ಕೂಡ ಅದರಿಂದ ಹೊರತಾಗಿ ಇರಲು ಸಾಧ್ಯವಿಲ್ಲ; ಬಯಸುವುದೂ ಕಷ್ಟ. ಶಿಕ್ಷಣ, ಆರೋಗ್ಯದಂತಹ ಸೇವಾ ಕ್ಷೇತ್ರಗಳೇ ಇವತ್ತು ಮಾರುಕಟ್ಟೆಯಲ್ಲಿ ಸರಕಾಗಿ ಗ್ರಾಹಕರಿಗಾಗಿ ಕಾಯುತ್ತಿರುವ ದಿನಗಳಿವು. ಹೀಗಿರುವಾಗ ಮಾಧ್ಯಮವನ್ನು ಮಾತ್ರ ಸೇವೆಯ ರೀತಿಯಲ್ಲಿ ನೋಡಲು ಹೇಗೆ ಸಾಧ್ಯವಾಗುತ್ತದೆ? ಅದು ಸದ್ಯದ ಪ್ರಶ್ನೆ. ಇಂತಹ ಔದ್ಯಮಿಕ ಒತ್ತಡಗಳಿರುವ ಕ್ಷೇತ್ರವೊಂದರಲ್ಲಿ ಸಹಜವಾಗಿಯೇ ಹಲವು ರೀತಿಯ ಹಿತಾಸಕ್ತಿಗಳು ಕೆಲಸ ಮಾಡುತ್ತವೆ. ಅವುಗಳದ್ದೇ ಆದಂತಹ ರಾಜಕೀಯ, ಆರ್ಥಿಕ ಪೂವ್ರಾಗ್ರಹಗಳು ಸುದ್ದಿಯ ರೂಪದಲ್ಲಿ ಜನ ಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ. ಇದನ್ನು ನೈತಿಕತೆ ಎಂಬ ಚರ್ಚೆಯಿಂದ ಹೊರಗಿಟ್ಟರೆ ಮಾತ್ರವೇ ಇಂತಹ ಕ್ಷೇತ್ರದ ಗೌರವಾನ್ವಿತ ಮಾನವ ಸಂಪನ್ಮೂಲ ಎನ್ನಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ನಮ್ಮ ದೇಶದ ಮಾಧ್ಯಮಗಳಿಗೆ ವಿಶೇಷ ಹಿನ್ನೆಲೆಯಿದೆ. ಇದು ವಸಹಾತುಶಾಹಿ ವಿರುದ್ಧ ಹೋರಾಟ ಮಾಡಿದ ಆಫ್ರಿಕನ್‍ ಹಾಗೂ ಲ್ಯಾಟಿನ್‍ ಅಮೆರಿಕಾ ದೇಶಗಳ ಮಾಧ್ಯಮಗಳಿಗೆ ಇರುವಂತಹ ಹಿನ್ನೆಲೆ. ಒಂದು ಕಡೆ ರಾಷ್ಟ್ರೀಯ ಚಳವಳಿ ಮತ್ತೊಂದು ಕಡೆ ಪ್ರಬಲ ಆರ್ಥಿಕ ಹಿತಾಸಕ್ತಿಯನ್ನು ಹೊಂದಿದ್ದ ಬ್ರಿಟಿಷ್‍ ಈಸ್ಟ್‍ ಇಂಡಿಯಾ ಕಂಪನಿ. ಇವುಗಳ ನಡುವೆ ಮಾಧ್ಯಮ ಎಂಬುದು ಯಾವತ್ತಿಗೂ ಸ್ವಾತಂತ್ರ್ಯ ಚಳುವಳಿಗೆ ಪೂರಕವಾಗಿಯೇ ಇತ್ತು. ಹಾಗಂತ ಹೇಳುತ್ತದೆ ಭಾರತದ ಪತ್ರಿಕೋದ್ಯಮದ ಇತಿಹಾಸ. ಸ್ವಾತಂತ್ರ್ಯ ನಂತರವಂತೂ ಹೊಸ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಧ್ಯಮಗಳ ಒಂದು ಅಂಚಿನವರೆಗೂ ನಿರ್ವಹಿಸಿದ ಪಾತ್ರ ದೊಡ್ಡದಿತ್ತು. ಆದರೆ, 90ರ  ದಶಕದ ನಂತರ ಆದ ಮಹತ್ವದ ಬದಲಾವಣೆಯಲ್ಲಿ ಮಾಧ್ಯಮಗಳು ಅನಿವಾರ್ಯವಾಗಿ ತಮ್ಮನ್ನು ತಾವು ಮುಕ್ತ ಆರ್ಥಿಕ ನೀತಿಗಳಿಗೆ ಒಗ್ಗಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಯಿತು. 

ಇಲ್ಲಿನ ಮಾಧ್ಯಮ ಕ್ಷೇತ್ರ ಸಹಜವಾಗಿಯೇ ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿತು. ಅದು ಮೊದಲು ಮನೋರಂಜನೆಯ ರೂಪದಲ್ಲಿ, ನಂತರ ಸುದ್ದಿಯ ರೂಪದಲ್ಲಿ ವಿದೇಶಿ ಮಾಧ್ಯಗಳ ವಿಶೇಷವಾಗಿ ಅಮೆರಿಕನ್ ಮಾಧ್ಯಮಗಳ ಯಥಾವತ್ ನಕಲು ಮೂಡಿಬರಲು ಶುರುವಾಯಿತು. ಮನೋರಂಜನೆ ಹೆಸರಿನಲ್ಲಿ ಅಮದು ಮಾಡಿಕೊಂಡ ಪರಿಕರಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ ಎಂಬ ಪೂರ್ವಾಗ್ರಹ ಇಲ್ಲಿ ಕೆಲಸ ಮಾಡಿರುವ ಸಾಧ್ಯತೆಯೂ ಇದೆ. ಆದರೆ, ಅದಕ್ಕಿಂತಹಲೂ ಮುಖ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಜನ ನೋಡುತ್ತಿದ್ದಾರೆ ಎಂಬುದಕ್ಕೆ ‘ರೇಟಿಂಗ್’ ಎಂಬ ಪಟ್ಟ ಕಟ್ಟುವ ಕೆಲಸ ನಡೆಯಿತು. ಯಾವುದು ಹೆಚ್ಚು ರೇಟಿಂಗ್ ಪಡೆಯುತ್ತದೆಯೋ, ಅದೇ ಸರ್ವಶ್ರೇಷ್ಠ ಎಂಬ ಭಾವನೆ ಬರುವಂತೆ ನೋಡಿಕೊಳ್ಳಲಾಯಿತು. ಅಂತಹ ಸರ್ವಶ್ರೇಷ್ಠತೆಗಳಿಗೆ ಜಾಹೀರಾತು ರೂಪದಲ್ಲಿ ಹಣ ಹರಿದುಬರುವಂತೆ ಮಾಡಲಾಯಿತು. ಈ ಶ್ರೇಷ್ಠತೆ, ರೇಟಿಂಗ್, ಜಾಹೀರಾತು ಎಂಬ ವಿಷಚಕ್ರವನ್ನು ಅತ್ಯಂತ ಸಮರ್ಪಕವಾಗಿ ಸ್ಥಾಪಿಸಲಾಯಿತು. ಇದರ ಹಿಂದೆ ಕೆಲಸ ಮಾಡಿದ್ದ ಪೂವ್ರಾಗ್ರಹಗಳು ಎಂಥದ್ದು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗಲಾರದು. ಯಾಕೆಂದರೆ, ಇವತ್ತು ಜಾಗತಿಕ ಮುಕ್ತ ಮಾರುಕಟ್ಟೆಯ ಪರಿಭಾಷೆಯೂ ಇದೇ ಆಗಿರುವುದರಿಂದ ಹಿಂದಿನಂತೆ ಅಪರಿಚಿತ ಪದಗಳು ಇವಾಗಿಲ್ಲ ಎಂಬುದನ್ನೂ ಗಮನಿಸಬೇಕಿದೆ.

ಮುಕ್ತ ಮಾರುಕಟ್ಟೆ ಎಂಬುದನ್ನು ಹೀಗೀಗೆ ಎಂದು ನಿರೂಪಿಸಲು ಸಾಧ್ಯವಾಗದೇ ಹೋಗಬಹುದು. ಸುಮಾರು ಮುನ್ನೂರು ವರ್ಷಗಳಷ್ಟು ಇತಿಹಾಸ ಇರುವ ‘ವಾಲ್‍ಸ್ಟ್ರೀಟ್‍’ನಂತಹ ಶೇರು ಮಾರುಕಟ್ಟೆಯ ಹೃದಯದ ಬಡಿತವನ್ನು ಅಳೆಯುವುದು ಕಷ್ಟವಾಗಬಹುದು. ಆದರೆ, ಅದು ಸಾಮಾಜಿಕವಾಗಿ ಮಾಡಿರುವ ಪರಿಣಾಮ ಎಂಥದ್ದು ಎಂಬುದು ಕಣ್ಮುಂದೆ ಇದೆ. ಇಲ್ಲಿ ಸಂಸ್ಥೆ, ದೇಶ ಅಥವಾ ಸಮುದಾಯಗಳಲ್ಲಿ ನೈತಿಕ ಅಧಃಪತನ ಕಾಣುತ್ತಿದ್ದೇವೆ. ನಿತ್ಯ ಜೀವನದ ಕುರಿತೇ ಪೂರ್ವಾಗ್ರಹಗಳು ಬೆಸೆದುಕೊಂಡಿವೆ. ಇದು ಮಾಧ್ಯಮಗಳಲ್ಲೂ ಇದೆ ಎನ್ನಬಹುದಿತ್ತು. ಆದರೆ, ವಿಸ್ತಾರವಾಗಿ ಆಲೋಚಿಸಿದರೆ, ಹೀಗೊಂದು ನೈತಿಕ ಅದಃಪತನಕ್ಕೆ ಮಾಧ್ಯಮಗಳ ಕೊಡುಗೆಯೂ ಎದ್ದು ಕಾಣುತ್ತದೆ. ಅದು ವೈಯುಕ್ತಿಕ ನೆಲೆಯ ನೈತಿಕ ವಿಚಾರಗಳಿಂದ ಶುರುವಾಗಿ, ಸಾಂಸ್ಕೃತಿಕ ವಿಚಾರಗಳವರೆಗೂ ಮಾಧ್ಯಮಗಳ ಪ್ರೇರಣೆಯಿಂದ ಆಗಿರುವ ಬದಲಾವಣೆ ಕುರಿತು ಇವತ್ತು ಆಳವಾದ ಅಧ್ಯಯನಗಳ ಅಗತ್ಯವಿದೆ. ಸಾಮಾನ್ಯವಾಗಿ ಅನುಭವದ ಆಧಾರದ ಮೇಲೆ ಕೆಲವು ವಿಚಾರಗಳನ್ನು ಗುರುತು ಮಾಡಬಹುದಾದರೂ, ಅಂತಿಮವಾಗಿ ಸ್ಪಷ್ಟರೂಪದಲ್ಲಿ ಬದಲಾಗಿರುವ ಚಿತ್ರಣವನ್ನು ಕಟ್ಟಿಕೊಳ್ಳುವುದು ಇಂದಿನ ಅಗತ್ಯವಾಗಿದೆ.  
ಸುದ್ದಿ ವಿಚಾರದಲ್ಲಿ ನೈತಿಕತೆ
ಇನ್ನು, ಮಾಧ್ಯಮದ ಹೃದಯಭಾಗ ಸುದ್ದಿಗಳ ವಿಚಾರಕ್ಕೆ ಬರುವುದಾರೆ ನಿಖರತೆ, ಸ್ಪಷ್ಟತೆ ಹಾಗೂ ನಿಷ್ಪಕ್ಷಪಾತವಾಗಿರುವುದು ‘ಮಾಧ್ಯಮ ನೈತಿಕತೆ’ ಎಂದು ಕರೆಸಿಕೊಳ್ಳುತ್ತದೆ. ಅದು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಗುರುತನ್ನು ಗೌಪ್ಯವಾಗಿಡುವ, ಎಚ್‍ಐವಿ ಪೀಡಿತರ ಕುರಿತು ಸುದ್ದಿ ಮಾಡುವಾದ ಸೂಕ್ಷ್ಮತೆಗಳನ್ನು ಹೊಂದಿರುವ ಹಾಗೂ ಅಶ್ಲೀಲ ದೃಶ್ಯ ಅಥವಾ ಚಿತ್ರಗಳನ್ನು ಬಳಸದಿರುವ ಸಾಮಾನ್ಯ ವಿಚಾರಗಳಿಂದ ಆರಂಭವಾಗಿ ಯಾವುದೇ ಸುದ್ದಿಯನ್ನು ಸುದ್ದಿಯಾಗಿ ಮಾತ್ರವೇ ಜನರಿಗೆ ತಲುಪಿಸುವವರೆಗೂ ನೈತಿಕತೆಯ ನೆರಳು ಕಾಯುತ್ತದೆ. 1970ರಲ್ಲಿಯೇ ‘ನ್ಯೂ ವರ್ಡ್‍ ಇನ್ಫೊಮೇಷನ್‍ ಅಂಡ್‍ ಕಮ್ಯುನಿಕೇಷನ್‍ ಆರ್ಡರ್’ ಎಂಬ ಸಂಸ್ಥೆ ಇಂತಹ ಕೆಲವು ನಿಯಮಾವಳಿಗಳನ್ನು ಪಟ್ಟಿ ಮಾಡಿತ್ತು. ಮುಂದೆ, ಅದಕ್ಕೆ ವಿರುದ್ಧವಾಗಿ ಮತ್ತೊಂದಿಷ್ಟು ಜಾಗತಿಕ ಸಂಸ್ಥೆಗಳು ಮಾಧ್ಯಮಗಳ ನೈತಿಕತೆ ಎಂದರೇನು ಎಂದು ತಿಳಿಸಲು ಮುಂದಾದವು. ಹೀಗೆ ಎರಡು ದಶಕಗಳವರೆಗೂ ಈ ವಿಚಾರ ಚರ್ಚೆಯಲ್ಲಿ ಇತ್ತಾದರೂ, ಕೊನೆಗೆ ‘ಮಾಧ್ಯಮ ನೈತಿಕತೆ’ ಎಂಬುದು ಹಳಸಲು ಪದದ ರೀತಿ ಧ್ವನಿಸಲು ಶುರುವಾಯಿತು. ಸದ್ಯ ಮೆಕ್ಸಿಕೋದಂತಹ ದೇಶಗಳಲ್ಲಿ ಪತ್ರಕರ್ತರು ಕೊಲೆಯಾಗುವುದು ಸಾಮಾನ್ಯ ಎಂಬಂತೆ ಆಗಿದೆ. ಅಲ್ಲಿನ ಡ್ರಗ್‍ ಲಾಭಿಯ ವಿರುದ್ಧ ಬರೆಯುವ ಅಥವಾ ಚಿತ್ರೀಕರಿಸುವ ಪ್ರತಿ ಪತ್ರಕರ್ತನೂ ಸಾವಿನ ಅಂಚಿನಲ್ಲಿದ್ದುಕೊಂಡೇ ಕೆಲಸ ಮಾಡುತ್ತಾನೆ. ಇಂತಹ ಸ್ಥಿತಿ ಇರಾಕ್‍, ಈಜಿಪ್ಟ್‍, ಚೆಚೆನ್ಯಾ, ಮಂಗೋಲಿಯಾ, ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ಇದೆ. ಇದಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ವೃತ್ತಪರ ಪತ್ರಿಕೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ನಿರ್ಭೀತವಾಗಿರುವ ಪತ್ರಿಕೋದ್ಯಮದ ಸಾಧ್ಯತೆಗಳಿವೆ. ಆದರೆ ಇಲ್ಲಿರುವ ಸಮಸ್ಯೆ ವೈಯುಕ್ತಿಕ ಮಿತಿಗಳದ್ದು. ಒಂದು ಕ್ಷೇತ್ರವಾಗಿ ಭಾರತದ ಪತ್ರಿಕೋದ್ಯಮಕ್ಕೆ ಒಂದಷ್ಟು ಚೌಕಟ್ಟುಗಳು ಇದ್ದಿರಬಹುದು. ಒಂದು ಸಮುದಾಯವಾಗಿ ಇಲ್ಲಿನ ಪತ್ರಕರ್ತರಿಗೆ ಕೆಲವು ಸಮಸ್ಯೆಗಳು ಇದ್ದಿರಬಹುದು. ಆದರೆ ವೈಯುಕ್ತಿಕ ಆಲೋಚನೆಯಲ್ಲಿ ಅಂತಹ ಎಲ್ಲಾ ಚೌಕಟ್ಟುಗಳನ್ನು ಮೀರುವ, ಮಿತಿಗಳನ್ನು ದಾಟುವ ಸಾಧ್ಯತೆಯಂತೂ ಎಲ್ಲಾ ಕಾಲಕ್ಕೂ ಜೀವಂತವಾಗಿರುತ್ತದೆ. ಆದರೆ, ಇಲ್ಲಿ ಸ್ವಯಂ ಮಿತಿಗಳನ್ನು ಹಾಕಿಕೊಳ್ಳುವ ಸ್ಥಿತಿ ಇದೆ. ಇದರಿಂದಾಗಿ ನೈತಿಕತೆ ಎಂಬುದು ಹೆಚ್ಚು ಕಾಡುವ ಅಂಶವಾಗಿ ಉಳಿಯುವುದಿಲ್ಲ. ‘ಭ್ರಷ್ಟಾಚಾರ ಎಲ್ಲಾ ಕಡೆಗೂ ಇದೆ. ಇವತ್ತು ದುಡ್ಡಿದ್ದರೆ ಮಾತ್ರ ಬದುಕು,’’ ಎಂಬ ಜನಪ್ರಿಯ ಮಾತುಗಳು ಇಲ್ಲೂ ಧ್ವನಿಸುತ್ತಿವೆ. ಹೀಗಿರುವಾಗ ನೈತುಕತೆ ಎಂಬುದು ಸುದ್ದಿಯ ವಿಚಾರಕ್ಕೆ ಅನ್ವಯಿಸಿಕೊಳ್ಳಬೇಕಾ? ಪತ್ರಿಕೋದ್ಯಮದ ಪಠ್ಯಗಳಲ್ಲಿ ಇರುವಂತೆ ಯಾಂತ್ರಿಕ ಪಟ್ಟಿಯನ್ನು ಮಾಡಬೇಕಾ ಅಥವಾ ಬದಲಾದ ಕಾಲದಲ್ಲಿ ಹೊಸ ಪರಿಭಾಷೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಾ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಆದರೆ, ಇಂತಹ ಪ್ರಶ್ನೆಗಳಿಗೆ ಇಲ್ಲಿ ಹೆಚ್ಚಿನ ಅವಕಾಶ ಇಲ್ಲ. ಅಥವಾ ಇಂತಹ ಪ್ರಶ್ನೆಗಳು ಅಪ್ರಸ್ತುತ ಎಂಬ ಭಾವನೆ ಇದೆ. ಒಂದು ವೇಳೆ ಹೀಗೆ ಪ್ರಶ್ನೆಗಳು ಹುಟ್ಟುವ ಅವಕಾಶ ಸೃಷ್ಠಿಯಾದರೆ ನಿತ್ಯದ ಬದುಕಿಗೆ ಸಮಸ್ಯೆಯಾಗುತ್ತದೆ ಎಂಬ ಪೂರ್ವಾಗ್ರಹವೂ ಇದೆ.  ಇದರಿಂದಾಗಿಯೇ ಒಂದು ರೀತಿಯ ಕಂಫರ್ಟ್‍ ಆಗಿರುವ ಭಾವನೆ ಇಲ್ಲಿನ ಪತ್ರಿಕೋದ್ಯಮದಲ್ಲಿ ಕಾಪಾಡಿಕೊಂಡು ಬರುತ್ತಿರುವುದು ಗೋಚರಿಸುತ್ತದೆ. ನೈತಿಕ ವಿಚಾರಗಳ ಕುರಿತು ಹೆಚ್ಚಿನ ಗಮನ ಹರಿಸದಿದ್ದರೆ, ಸುಲಭವಾಗಿ ಬದುಕು ಬದಲಾಗಿ ಬಿಡುವ ಅವಕಾಶಗಳು ಇಲ್ಲಿ ಸಿಗುತ್ತಿದೆ. ಇದರಿಂದಾಗಿಯೇ ಮಾಧ್ಯಮ ನೈತಿಕತೆ ತನ್ನ ನಿಜ ಅರ್ಥವನ್ನು ಕಳೆದುಕೊಂಡಿದೆ. ಜತೆಗೆ ಇವತ್ತಿಗೆ ಮಾಧ್ಯಮ ನೈತಿಕತೆ ಎಂಬುದನ್ನು ವ್ಯಾಖ್ಯಾನಿಸುವ ಪರಿಭಾಷೆಯೂ ಬದಲಾಗಬೇಕಾದ ಅಗತ್ಯವಿದೆ.

ಪೂರ್ವಾಗ್ರಹದ ಸುತ್ತ
ನೈತುಕ ಪ್ರಜ್ಞೆ ಕಳೆದುಕೊಂಡ ಸಮಾಜ ಹೆಚ್ಚು ಪೂರ್ವಾಗ್ರಹಕ್ಕೆ ಒಳಗಾಗುತ್ತದೆ. ಅದಕ್ಕೆ ಇತಿಹಾಸಕ್ಕೆ ಹೇರಳ ಉದಾಹರಣೆಗಳು ಸಿಗುತ್ತದೆ. ಆದರ್ಶಗಳು ಶಾಂತಿಯುತವಾಗಿರುತ್ತವೆ, ಆದರೆ ಇತಿಹಾಸ ಎಂಬುದು ಹೆಚ್ಚು ಭೀಕರ. ಶಾಂತಿ ಮತ್ತು ಭೀಕರತೆಗಳ ನಡುವೆ ಒಂದು ನಿರ್ಲಿಪ್ತ ಕಾಲಘಟ್ಟ ಇರುತ್ತದೆ. ಅದರೊಳಗೆ ಎಲ್ಲವೂ ಸಂತುಷ್ಟಗೊಂಡಂತೆ ಲೇಪನ ಹಚ್ಚಿ ಇಡಲಾಗುತ್ತದೆ. ಅಂತಹದೊಂದು ಕಾಲದಲ್ಲಿ ನಾವೀಗ ಬದುಕುತ್ತಿದ್ದೇವೆ. ಅಂತಹದೊಂದು ವಾತಾವರಣೆ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಅದರ ಪ್ರತಿಫಲವನ್ನು ಕೆಲವು ಪಡೆಯುವ ಪತ್ರಕರ್ತ ಸಹಜವಾಗಿಯೇ ಹೆಚ್ಚು ಸಂತುಷ್ಟನಾಗಿ ಬದುಕುವ ಹಾದಿ ಕೊಂಡುಕೊಳ್ಳುತ್ತಾನೆ. ಇದು ಈತನನ್ನು ಇನ್ನಷ್ಟು ಪೂರ್ವಾಗ್ರಹ ಪೀಡಿತನನ್ನಾಗಿ, ಯಾವುದೋ ಒಂದು ವಿಚಾರದ ಪರ ಅಥವಾ ವಿರೋಧಿಯನ್ನಾಗಿ ಬದಲಾಯಿಸಿಬಿಟ್ಟಿರುವ ಸಾಧ್ಯತೆಯೂ ಇದೆ. ಒಬ್ಬ ನಿರ್ಧಿಷ್ಟ ಶತ್ರು ಇಲ್ಲ ಅಂತಾದರೆ, ಒಂದು ಸಾಮಾನ್ಯವಾಗಿರುವ ಗುರಿ ಇಲ್ಲ ಅಂತಾದರೆ ಎದುರಾಗುವ ಸಮಸ್ಯೆ ಸಮಷ್ಠಿಯದ್ದು. ಸಾಮುದಾಯಿಕ ಹಿತಾಸಕ್ತಿ ಕಳೆದು ಹೋಗಿರುವುದು ಇವತ್ತಿನ ಮಾಧ್ಯಮ ಜಗತ್ತಿನ ಸಮಸ್ಯೆ ಕೂಡ. ಇಲ್ಲಿ ಯಾರೂ ಶತ್ರುಗಳೂ ಅಲ್ಲ, ಯಾರು ಮಿತ್ರರೂ ಅಲ್ಲ. ಕೇಳುವುದಕ್ಕೆ ಇದು ವಸ್ತುನಿಷ್ಟತೆಯ ಧ್ವನಿಯಂತೆ ಕಂಡರೂ, ಇದರ ಹಿಂದೆ ಅಡಗಿರುವುದು ಪೂರ್ವಾಗ್ರಹ ಪೀಡಿತ, ಸ್ವ ಹಿತಾಸಕ್ತಿ ಇವತ್ತಿನ ಪತ್ರಿಕೋದ್ಯಮವನ್ನು ಬಲಿ ತೆಗೆದುಕೊಳ್ಳುತ್ತಿದೆ.
ಸಾಮಾನ್ಯವಾಗಿ ಪತ್ರಿಕೋದ್ಯಮ ಅಥವಾ ಮಾಧ್ಯಮ ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು. ಅದರಲ್ಲೂ ಭಾರತದಂತಹ ದೇಶಗಳಲ್ಲಿ ಧಾರ್ಮಿಕತೆ ಎಂಬುದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯದಂತಹ ಆಯಾಮಗಳನ್ನು ಪಡೆದುಕೊಳ್ಳುವ ಸಮಯದಲ್ಲಿ ಮಾಧ್ಯಮ ಹೆಚ್ಚು ಸಂಯಮದಿಂದ ಹಾಗೂ ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಆದರೆ, ಸದ್ಯ ಧರ್ಮದ ಪರ ಮತ್ತು ಕಡು ವಿರೋಧ ಎಂಬ ಎರಡು ವಿರುದ್ಧಾರ್ಥಕ ಪದಗಳ ನಡುವೆ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ತಮ್ಮ ಗ್ರಾಹಕರು ಖುಷಿಯಾಗುತ್ತಾರೆ ಎಂದು ಅವರು ಭಾವಿಸಿಕೊಂಡಂತೆ ಇದೆ. ಇದರ ನಡುವೆ ಇರಬಹುದಾದ ಸೂಕ್ಷ್ಮ ಎಳೆ ಕಳೆದುಹೋಗುತ್ತಿದೆ. ಇದು ರಾಜಕೀಯ ಪಕ್ಷಗಳ ವಿಚಾರದಲ್ಲೇ ಆಗಿರಬಹುದು ಅಥವಾ ಒಬ್ಬ ನಾಯಕನ ಪರ ಮತ್ತು ವಿರೋಧದ ವಿಚಾರದಲ್ಲೇ ಆಗಿರಬಹುದು. ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುವಂತಹ, ಮುಕ್ತ ಚರ್ಚೆಗೆ ಅವಕಾಶ ಇಲ್ಲದಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇದು ಮಾಧ್ಯಮದಲ್ಲಿ ಕೆಲಸ ಮಾಡುವವರ ಪೂರ್ವಾಗ್ರಹಕ್ಕೆ ಸಂಬಂಧಿಸಿದ ಅಂಶಗಳು.

ಮುಂದಿರುವ ಸವಾಲು ಮತ್ತು ಸಾಧ್ಯತೆಗಳು
ಇವತ್ತು ಮಾಹಿತಿ ಎಂಬುದು ಬೆರಳ ತುದಿಯಲ್ಲಿದೆ. ವಿಕಿಪೀಡಿಯಾದಂತಹ ವೆಬ್‍ಸೈಟ್‍ಗೆ ಹೋಗಿ ‘ಮೀಡಿಯಾ ಎಥಿಕ್ಸ್‍’ ಎಂಬ ಎರಡು ಪದಗಳನ್ನು ನೀಡಿದರೆ ಸಾಕು, ಮಾಹಿತಿ ಪುಟಗಳು ಹೇರಳವಾಗಿ ತೆರೆದುಕೊಳ್ಳುತ್ತವೆ. ಒಬ್ಬ ಪತ್ರಕರ್ತನಿಗೆ ಇರುವು ಚೌಕಟ್ಟುಗಳೇನು? ಅವನು ವೃತ್ತಿಯಲ್ಲಿ ಪಾಲಿಸಬೇಕಾದ ನೀತಿಗಳೇನು ಎಂಬ ವಿಚಾರಗಳು ಸಿಗುತ್ತವೆ. ಆದರೆ, ಈ ಮಾಹಿತಿ, ಕೇವಲ ಮಾಹಿತಿಯಾಗಿ ಅಷ್ಟೆ ಉಳಿದುಬಿಡುತ್ತಿವೆ. ಅದು ಜ್ಞಾನವಾಗಿ ಬದಲಾಗುತ್ತಿಲ್ಲ. ನಿತ್ಯ ಜೀವನ ಸರಕಾಗಿಯೂ ಅದು ಬಳಕೆಗೆ ಯೋಗ್ಯವಾಗಿಲ್ಲ. ಇದಕ್ಕೆ ಇರುವ ಸಮಸ್ಯೆ, ಬದಲಾದ ಕಾಲದಲ್ಲಿ ನೈತಿಕತೆ ಎಂಬುದೂ ಬದಲಾಗಿರುತ್ತದೆ. ಪೂರ್ವಾಗ್ರಹಗಳೂ ಕೂಡ ತಮ್ಮ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡಿರುತ್ತವೆ. ಹೀಗಾಗಿ ಇವುಗಳನ್ನು ಅರ್ಥೈಸುವ ರೀತಿಯೂ ಬದಲಾಗಬೇಕಿರುತ್ತದೆ. ಅದು ಮುಂದಿನ ತಲೆಮಾರಿಕೆ ಪಠ್ಯವಾಗಿ ಬಂದರೆ ಮಾತ್ರವೇ, ಶಿಕ್ಷಣದ ಕಲಿಕೆಗೂ ನಿತ್ಯ ಜೀವನಕ್ಕೂ ಬಂಧವೊಂದು ಬೆಳೆಯುತ್ತದೆ. ಮಾಹಿತಿ ಜ್ಞಾನವಾಗಿ, ಜ್ಞಾನ ಬಳಕೆಯ ವಸ್ತುವಾಗಿ ಕಾಣಿಸುತ್ತದೆ. ಅದರಲ್ಲೂ ಪತ್ರಿಕೋದ್ಯಮವನ್ನು ಕನಸಾಗಿ ಇಟ್ಟುಕೊಂಡು ಬಂದವರು ಇನ್ನೂ ಹೆಚ್ಚು ಮುತುವರ್ಜಿಯಿಂದ ಈ ಕೆಲಸವನ್ನು ಮಾಡಬೇಕಿದೆ. ತಮಗೆ ಲಭ್ಯ ಮಾಹಿತಿ ಇಟ್ಟುಕೊಂಡು, ಮಾಧ್ಯಮಗಳು ಸಾಗುತ್ತಿರುವ ಹಾದಿ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಹುಡುಕಬೇಕಿದೆ. ಜತೆಗೆ ತಮ್ಮ ಇತಿಮಿತಿಗಳ ನಡುವೆಯೇ ಪರಿಹಾರದ ಹಾದಿಗಳನ್ನೂ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ.

ಇಲ್ಲವಾದರೆ, ‘ಮೀಡಿಯಾ ಎಥಿಕ್ಸ್’ ಎಂಬುದು ವಿಕಿಪೀಡಿಯಾ ಪೇಜ್‍ ರೀತಿಯಲ್ಲಿ ಕೇವಲ ಒಣ ಸಿದ್ಧಾಂತದಂತೆ ಮುಂದಿನ ತಲೆಮಾರಿಗೆ ಭಾಸವಾಗುವ ಅಪಾಯವೂ ಇದೆ. ಇವತ್ತು ಅಮೆರಿಕಾದಂತಹ ದೇಶಗಳ ಆರ್ಥಿಕತೆಯ ನೆರಳಿನಲ್ಲಿಯೇ ‘ಪ್ರೊ ಪಬ್ಲಿಕಾ’ದಂತಹ ವೆಬ್‍ಸೈಟ್‍ಗಳು ತಮ್ಮ ವಸ್ತುನಿಷ್ಟ ಪತ್ರಿಕೋದ್ಯಮವನ್ನು ನಡೆಸಿಕೊಂಡು ಬರುತ್ತಿವೆ. ಸುದ್ದಿಯ ವಿಚಾರದಲ್ಲಿ ನೈತಿಕತೆಯ ಮಹತ್ವವನ್ನು ಇಂತಹ ಕೆಲವು ಪರ್ಯಾಯ ಮಾಧ್ಯಮಗಳು ಮಾದರಿ ರೀತಿಯಲ್ಲಿ ಮುಂದಿಟ್ಟಿವೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ಇವುಗಳು ಮುಂದಿಡುತ್ತಿರುವ ಸುದ್ದಿಗಳು ಹಾಗೂ ವಿಚಾರಗಳು ಪ್ರಭಾವ ಬೀರುತ್ತಿವೆ. ಇದಕ್ಕೆ ಬೆನ್ನುಲುಬಾಗಿ ನಿಂತಿರುವರ ಮತ್ತದೇ ಜನಸಾಮಾನ್ಯರು ಎಂಬುದು ಅಲ್ಲಿನ ಸಾಮಾಜಿಕ ಮನಸ್ಥಿತಿಯನ್ನು ಬಿಂಬಿಸುತ್ತದೆ. ಆದರೆ, ನಮ್ಮಲ್ಲಿ ಇಂತಹದೊಂದು ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳು ಸಧ್ಯಕ್ಕಂತೂ ಕಾಣಿಸುತ್ತಿಲ್ಲ. ಸಾಮಾಜಿಕ ಎಚ್ಚರಿಕೆ ಮೂಡದ ಹೊರತು ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ, ತಮಗೆ ತಾವೇ ಹಾಕಿಕೊಂಡುವ ನಿರ್ಭಂಧಗಳಿಂದ ಹೊರಬರುವುದು ಕಷ್ಟ. ಜತೆಗೆ, ಪೂರ್ವಾಗ್ರಹ ಪೀಡಿತ ಸಮಾಜ ಮನಸ್ಥಿತಿ, ಮೀಡಿಯಾದ ಮನಸ್ಥಿತಿಯಾಗಿಯೂ ಕಾಣುತ್ತಿರುವಾಗ, ಬರೀ ಮಾಧ್ಯಮ ಮಾತ್ರ ಬದಲಾವಣೆ ಆಗಬೇಕು ಎಂದು ಬಯಸುವುದು ವಾಸ್ತವ ಅಲ್ಲ. ಹೀಗಾಗಿ, ಎದುರಿಗೆ ಇರುವ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಒಂದು ಸಮಗ್ರವಾದ ಚಿಂತನೆಯ ಅಗತ್ಯವಂತೂ ಇವತ್ತಿಗೆ ಇದೆ.  


ಕೊನೆಯದಾಗಿ, ಸಮಾಜದ ಪಾಲಿಗೆ ಮಾಧ್ಯಮ ಎಂಬುದು ಅತ್ಯಂತ ಅಗತ್ಯವಾದ ಕ್ಷೇತ್ರ. ಸಾಕಷ್ಟು ಮಿತಿಗಳು ಮತ್ತು ಸಮಸ್ಯೆಗಳ ಹೊರತಾಗಿಯೂ ಇಲ್ಲಿರುವ ಸಾಧ್ಯತೆಗಳು ಅಪಾರವಾಗಿವೆ. ಸದ್ಯಕ್ಕೆ ಮಾಧ್ಯಮಗಳನ್ನು ಕಾಡುತ್ತಿರುವ ಪೂರ್ವಾಗ್ರಹಗಳು ಮತ್ತು ನೈತಿಕ ವಿಚಾರಗಳನ್ನು ವೈಯುಕ್ತಿಕ ನೆಲೆಯಿಂದ ಸಾಮುದಾಯಿಕ ನೆಲೆಗೆ ವಿಸ್ತರಿಸಕೊಂಡು ನೋಡುವ ಮತ್ತು ಅದಕ್ಕೆ ಕಡಿವಾಣ ಹಾಕಲು ಮತ್ತೆ ಸಮುದಾಯ ನೆಲೆಯಿಂದ ವೈಯುಕ್ತಿಕ ನೆಲೆಯವರೆಗೆ ಪರಿಹಾರಗಳನ್ನೂ ಕಂಡುಕೊಳ್ಳುವುದು ಇವತ್ತಿನ ಅಗತ್ಯವಾಗಿದೆ. ಈ ಮೂಲಕ ಜಗತ್ತಿನ ಅತ್ಯುತ್ತಮ ವೃತ್ತಿಗಳಲ್ಲಿ ಒಂದಾದ ಪ್ರತಿಕೋದ್ಯಮವನ್ನು ಅಥವಾ ಇವತ್ತಿನ ಮಾಧ್ಯಮ ಎಂಬ ವಿಸ್ತಾರ ರೂಪವನ್ನು ವಿಶಾಲ ನೆಲೆಗೆ ಕೊಂಡೊಯ್ಯುವ ಸಾಧ್ಯವಾಗುತ್ತದೆ. ಮಾಧ್ಯಮ ಜಗತ್ತಿನಲ್ಲಿ ಕಡಿಮೆ ಪೂರ್ವಾಗ್ರಹಗಳು ಹಾಗೂ ಹೆಚ್ಚು ನೈತಿಕತೆ ಅಂಶಗಳು ಬೆಳೆದಷ್ಟು ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ. ಅಷ್ಟರ ಮಟ್ಟಿಗೆ ಮಾಧ್ಯಮಗಳ ಪ್ರಭಾವ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. 

ಸೋಮವಾರ, ಮಾರ್ಚ್ 30, 2015

ಭಾರತದಲ್ಲಿ ಭಯೋತ್ಪಾದನೆ ಮೂಲಗಳು ಹಾಗೂ ನಿಗ್ರಹ ಮಾರ್ಗಗಳು



ಕ್ರತಿಕಾ.ಕೆ. ಮಂಗಳೂರು
“ನಿಕ್ಷೇಪ 2014-15” ಸ್ಪರ್ಧೆಯಲ್ಲಿ ತ್ರತೀಯ ಬಹುಮಾನ ಪಡೆದ ಲೇಖನ

“ಭಯೋತ್ಪಾದನೆ” ಎಂಬ ಶಬ್ದವೇ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುವ ಚಿತ್ರಣವೆಂದರೆ ಅರಾಜಕತೆ, ಭೀತಿ, ಹಿಂಸೆ ಮತ್ತು ಸಾವುನೋವಿನದ್ದಾಗಿದೆ. ಅದು ಜನ ಸಾಮಾನ್ಯರ ಒಪ್ಪಿಗೆ ಇದ್ದು ಅಥವಾ ಇಲ್ಲದೆಯೋ ನಡೆಯುವ ಒಂದು ಅನಧಿಕೃತವಾದ ಹಿಂಸಾ ಪ್ರವೃತ್ತಿ. ಇಂದು ಜಗತ್ತಿನ ಎದುರು ತಲೆ ಎತ್ತಿ ನಿಂತಿರುವ ಅತೀ ದೊಡ್ಡ ಸಮಸ್ಯೆಯೇ ಭಯೋತ್ಪಾದನೆ. ಆದರೆ ದುರಂತವೇನೆಂದರೆ ಇದರ ನಿಗ್ರಹಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ಅದು ಇನ್ನೂ ಮತ್ತೂ ಕಳೆ ಬೆಳೆದಂತೆ ದೈತ್ಯಾಕಾರವಾಗಿ ಬೆಳೆಯುತ್ತಿದೆ. ಎಷ್ಟೇ ಬೇಡವೆಂದು ದೂರವಿಟ್ಟರೂ ಅದು ಮತ್ತೆ ಮತ್ತೆ ಅಪ್ಪಳಿಸುತ್ತಿದೆ. ಭಯೋತ್ಪಾದನೆಯ ಇರುವಿಕೆ ಇಲ್ಲದ ಯಾವುದೊಂದು ದೇಶವೂ ಇಲ್ಲವೆನ್ನಬಹುದೇನೋ! ಇದೆಲ್ಲದರ ಕಾರಣ ಏನೇ ಇರಬಹುದು ಆದರೆ ಇದರ ನೇರ ಪರಿಣಾಮವಾಗುವುದು ಮಾತ್ರಾ ಅಮಾಯಕ ಜನಸಾಮಾನ್ಯರ ಮೇಲೆ.

ಭಯೋತ್ಪಾದನೆಯಲ್ಲಿ ವಿಮಾನ ಅಪಹರಣ, ಜೈವಿಕ ಭಯೋತ್ಪಾದನೆ, ಒತ್ತೆಸೆರೆ, ಸೈಬರ್ ಭಯೋತ್ಪಾದನೆ, ಕಾರ್ ಬಾಂಬಿಂಗ್, ಪರಮಾಣು ಭಯೋತ್ಪಾದನೆ, ಕಡಲ್ಗಳ್ಳತನ, ಆತ್ಮಾಹುತಿ ದಾಳಿ, ಮಾನವ ಬಾಂಬ್ ಇವೆಲ್ಲವೂ ಸೇರಿವೆ. ರಾಷ್ಟ್ರೀಯತವಾದ, ಅರಾಜಕತವಾದ, ಎಡಪಂಥೀಯ, ಬಲಪಂಥೀಯ, ಕೇಸರಿ ಭಯೋತ್ಪಾದನೆ ಮತ್ತು ಡ್ರಗ್ಸ್ ದಂಧೆ ಎಲ್ಲವೂ ಭಯೋತ್ಪಾದನೆಯ ವಿವಿಧ ರೂಪಗಳಾಗಿವೆ. ಭಯೋತ್ಪಾದನೆ ಎಂದರೆ ಅದು ಕೇವಲ ಧರ್ಮದ ವಿಚಾರಕ್ಕಷ್ಟೇ ಸಿಮಿತವಾಗಿಲ್ಲ, ಅದಕ್ಕೆ ಹಲವಾರು ಕಾರಣಗಳಿವೆ. ಭಾರತದಲ್ಲಿ ಪ್ರಸ್ತುತ ಇರುವ ಭಯೋತ್ಪಾದನೆಗೆ ಕೆಲವು ಧಾರ್ಮಿಕ ಪಂಗಡಗಳು ಮತ್ತು ನಕ್ಸಲ್ ಸಂಘಟನೆಗಳು ಇಂಬು ನೀಡುತ್ತಿವೆ.

ಉತ್ತರದ ಜಮ್ಮು – ಕಾಶ್ಮೀರ ಹಾಗೂ ಪೂರ್ವದಲ್ಲಿರುವ ರಾಜ್ಯಗಳು ಅತಿಯಾದ ಭಯೋತ್ಪಾದನೆಯ ವಿಷವ್ಯೂಹಕ್ಕೆ ಒಳಗಾದ ಭಾಗಗಳಾಗಿವೆ. ಜಮ್ಮು – ಕಾಶ್ಮೀರದಲ್ಲಿ ಇರುವ ದಂಗೆಗಳ ಕಾರಣಗಳು ಹಲವು ಹಾಗೂ ಮೀರಲಾಗದಂಥವು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಅದಕ್ಕೆ ಅತಿ ಮುಖ್ಯವಾದ ಕಾರಣ ಪಾಕಿಸ್ತಾನದ ಐ.ಎಸ್.ಐ ಅದು ಭಾರತೀಯ ಯುವಕರನ್ನು ತನ್ನ ಮುಜಾಹಿದ್ದೀನ್ ಸಂಘಟನೆಗೆ ಸೇರಿಸಲು ತರಬೇತಿ ನೀಡುತ್ತಿದೆ. ಇದರ ಫಲವಾಗಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅಪಾರ ಸಾವು ನೋವು ಸಂಭವಿಸುತ್ತಿದೆ. ಇದಲ್ಲದೆ ಮಿಲಿಟರಿಯವರಿಂದ ಮುಗ್ಧ ಜನರು ಅನುಭವಿಸಿದ ಶೋಷಣೆಯು ಜಮ್ಮು – ಕಾಶ್ಮೀರದಲ್ಲಿನ ಅರಾಜಕತೆಯ ಕಾರಣಗಳಾಗಿವೆ. ಇದರ ಪಾತ್ರದಿಂದಾಗಿ ಕಾಶ್ಮೀರದ ಸ್ವಾತಂತ್ರ್ಯದ ಬಗೆಗಿನ ಬೆಂಬಲ ಮತ್ತು ಅದನ್ನು ಪಾಕಿಸ್ತಾನದ ಭಾಗವಾಗಿ ಮಾಡುವ ರಾಜಕೀಯ ಹುನ್ನಾರ, ಮುಜಾಹಿದ್ದೀನ್ ಪ್ರಭಾವದಿಂದಾಗಿ ಸಂಭವಿಸುವ ಧಾರ್ಮಿಕ ಸಂಘರ್ಷಗಳು ಇವೆಲ್ಲಾ ಕಾಶ್ಮೀರಿ ಜನರ ನಿದ್ದೆ ಕೆಡಿಸಿವೆ. 

ಭಾರತದ ಪಶ್ಚಿಮ ಭಾಗದ 7 ಸೋದರ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಅರುಣಾಚಲ ಪ್ರದೇಶ, ಮಿಜೋರಂ, ಮತ್ತು ನಾಗಾಲ್ಯಾಂಡ್ ಎಷ್ಟೋ ವರ್ಷಗಳಿಂದ ಇಲ್ಲಿನ ಬುಡಕಟ್ಟು ಹಾಗೂ ಸರಕಾರದ ನಡುವಿನ ಸಂಘರ್ಷದಿಂದ ಬಸವಳಿದು ಹೋಗಿವೆ. ಇಲ್ಲಿ ನಡೆಯುವ ಘೋರ ಹಿಂಸಿಗಳಿಂದಾಗಿ ಅವುಗಳಿಗೆ ಅತಿ ಸೂಕ್ಷ್ಮ ಪ್ರದೇಶಗಳೆಂಬ ಹಣೆಪಟ್ಟಿಯನ್ನು ಹೊಂದಬೇಕಾದ ಪರಿಸ್ಥಿತಿ ಬಂದೊದಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ನಡೆದಿರುವ ಸಾವಿರಾರು ಹತ್ಯೆಗಳನ್ನು ನಾವು ಪತ್ರಿಕೆ ಹಗೂ ದೂರದರ್ಶನದಲ್ಲಿ ನೋಡಿದ್ದೇವಷ್ಟೆ, ಇದಕ್ಕೆ ಮುಖ್ಯ ಕಾರಣ ಹಿಂದಿನಿಂದಲೂ ಅನುಭವಿಸಿಕೊಂಡು ಬಂದಿರುವ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ, ನೆರೆ ರಾಷ್ಟ್ರಗಳ ಹಾವಳಿ ಅಥವ ಸಾರ್ವತ್ರಿಕ ಚುನಾವಣೆಯ ಸಂದರ್ಭ ಹೊರತುಪಡಿಸಿ ಈ ರಾಜ್ಯಗಳು ನಮ್ಮ ದೇಶದ ಭಾಗವೇ ಅಲ್ಲವೇನೋ ಎಂಬಂತೆ ವರ್ತಿಸುವುದು. ಅಷ್ಟು ಸಾಲದೆಂಬಂತೆ ಬಾಂಗ್ಲಾ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಯಾದ ಉಲ್ಫದ ಸಹಕಾರದಿಂದ ಈ ರಾಜ್ಯಗಳಲ್ಲಿ ದಂಗೆ ಎಬ್ಬಿಸುತ್ತಿರುವ ಅಕ್ರಮ ವಲಸಿಗ ಬಾಂಗ್ಲಾದೇಶಿಯರೂ ಕಾರಣ.

ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಭಯೋತ್ಪಾದನೆಯ ಪ್ರಭಾವ ಅಷ್ಟಾಗಿ ಕಾಣಬರುವುದಿಲ್ಲ. ಕರ್ನಾಟಕದಲ್ಲಿ ನಕ್ಸಲರ ಹೆಜ್ಜೆಯ ಗುರುತು ಕಂಡುಬಂದರೂ ಸಹ ರಾಜ್ಯ ಸರಕಾರವು ಅದನ್ನು ನಿಗ್ರಹಿಸುವಲ್ಲಿ ಬಹುಪಾಲು ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಹೊರತಾಗಿ ಬೇರೆ ಯಾವುದೇ ಅಂತಹ ಅಹಿತಕರ ಘಟನೆ ನಡೆದಿರುವ ಪ್ರಸಂಗ ಬೇರೆ ಇಲ್ಲ. ಶ್ರೀಲಂಕದ ಎಲ್.ಟಿ.ಟಿ.ಇ ಉಗ್ರರು ಪ್ರಮುಖವಾಗಿ ದಾಳಿಮಾಡಿದ ಪ್ರದೇಶ ತಮಿಳುನಾಡು ಆದರೆ ಅದರ ನಾಯಕರ ಹತ್ಯೆಯ ನಂತರ ಅದರ ಪ್ರಭಾವ ಗಣನೀಯವಾಗಿ ಕಡಿಮೆಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಉಗ್ರರ ದಾಳಿಗೆ ಪದೇ ಪದೇ ಬಲಿಯಾಗುವ ಪ್ರದೇಶವೆಂದರೆ ಅದು ನಮ್ಮ ದೇಶದ ಪ್ರಮುಖ ವಾಣಿಜ್ಯ ನಗರಿಯಾದ ಮುಂಬಯಿ. 1993 ರ ಸರಣಿ ಬಾಂಬ್ ಸ್ಪೋಟದಿಂದ ಹಿಡಿದು ಇತ್ತೀಚಿನ ತಾಜ್ ಮಹಲ್ ಹೋಟೇಲಿನ ತನಕ ಪ್ರಮುಖ ದಾಳಿಗಳಿಗೆ ಪ್ರಮುಖ ಗುರಿ ಮುಂಬಯಿ ನಗರಿಯೇ.

ಭಯೋತ್ಪಾದನೆಗೆ ಎಷ್ಟೇ ಕಾರಣಗಳನ್ನು ಹುಡುಕುತ್ತಾ ಹೋದರೂ ಮುಖ್ಯವಾಗಿ ಮುಖ್ಯವಾಗಿ ಕಂಡು ಬರುವುದೇ ಧಾರ್ಮಿಕ ಭಯೋತ್ಪಾದನೆ. ಇದು ಇಡೀ ಪ್ರಪಂಚವನ್ನೇ ಆವರಿಸಿದರೂ ಇದರ ಪ್ರಭಾವ ಮತ್ತು ಪರಿಣಾಮ ಭಾರತದಲ್ಲಿ ಇತರೆಡೆಗಳಿಗಿಂತ ತುಸು ಜಾಸ್ತಿಯೇ ಎನ್ನಬಹುದು. ಕೆಲವು ಧರ್ಮಾಂಧರ ಧರ್ಮದ ಬಗೆಗಿನ ಕುರುಡು ವ್ಯಾಮೋಹವೇ ಕಾರಣವಾಗಿ ಇಡೀ ದೇಶಕ್ಕೆ ದೇಶವೇ ಭಯೋತ್ಪಾದನೆಗೆ ಸಿಕ್ಕಿ ನರಳುತ್ತಿದೆ. ಇತರೆ ದೇಶಗಳ ಬಗೆಗಿನ, ಅನ್ಯ ಧರ್ಮಗಳ ಬಗೆಗಿನ, ಅಸಹನೆ, ತಿರಸ್ಕಾರ ಮನೋಭಾವವೇ “ಜಿಹಾದ್” ಎಂಬ ಧರ್ಮವಲ್ಲದ ಧರ್ಮಯುದ್ಧದ ಹಾದಿ ಹಿಡಿದು ಅಮಾಯಕರನ್ನು ಕೊಲ್ಲುವುದರ ಜೊತೆಗೆ ಇತರೆ ಅಮಾಯಕರನ್ನು ಹಾದಿ ತಪ್ಪಿಸಿ ತಮಗೆ ಬೇಕಾದ ಹಾಗೆ ಸಿದ್ಧಗೊಳಿಸಿ ಇನ್ನಷ್ಟು ಮಂದಿಯನ್ನು ಕೊಲ್ಲುವಂತೆ ಪ್ರೇರೇಪಿಸುತ್ತದೆ. ತಮ್ಮ ಧರ್ಮವನ್ನೇ ಇತರರ ಮೇಲೂ ಹೇರಬೇಕೆಂಬ ಹುಚ್ಚು ಅಭಿಮಾನದಿಂದ ಅವರ ಧರ್ಮವನ್ನು ಉಳಿಸುವುದರ ಬದಲು ಅದರ ಮೂಲ ಮೌಲ್ಯಗಳಿಗೆ ಚ್ಯುತಿ ತರುತ್ತಿದ್ದಾರೆ. ಪ್ರತಿಯೊಂದು ಧರ್ಮದ ಮೂಲವೂ ಶಾಂತಿಯ ಪ್ರತಿಪಾದನೆ ಎಂಬುದನ್ನು ಮರೆತು ಹಿಂಸಾ ಮಾರ್ಗ ಹಿಡಿದು ವಿಕೃತ ಮನಸ್ಕರಾಗಿ ಮಿಥ್ಯ ಸಮರದ ಮೂಲಕ ಕಿರುಕುಳ ನೀಡುವ ಇದು ಹೇಡಿತನವಲ್ಲದೆ ಮತ್ತೇನೂ ಅಲ್ಲ. ಧಾರ್ಮಿಕ ಭಯೋತ್ಪಾದನೆ ಎಂದರೆ ಕೇವಲ ಇಸ್ಲಾಂ ಧರ್ಮಾಂಧರಿಂದಾದ ಭಯೋತ್ಪಾದನೆ ಮಾತ್ರವಲ್ಲ, ಅದರಲ್ಲಿ ಕೇಸರಿ ಭಯೋತ್ಪಾದನೆಯೂ ಸೇರಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತೇವೆ ಎಂಬ ಮನೋಸ್ಥಿತಿಯೇ ಇದಕ್ಕೆ ಮುಖ್ಯ ಕಾರಣ. ಅನ್ಯ ಧರ್ಮದ ಮೇಲಿರುವ ಅಸಹಿಷ್ಣುತೆ, ಭಾರತೀಯ ಸಂಸ್ಕೃತಿಯ ಕುರಿತ ಅಜ್ಞಾನ ಎಲ್ಲಾವೂ ಸೇರಿ ಒಂದು ಧರ್ಮವು ಇನ್ನೊಂದು ಧರ್ಮವನ್ನು ಕಂಡರಾಗದೆಂಬಂತ ಪತಿಸ್ಥಿತಿಯನ್ನು ನಾವಿಂದು ತಲುಪಿದ್ದೇವೆ.

ನಮ್ಮ ದೇಶದ ಮಣ್ಣಿನಲ್ಲಿಯೇ ಹುಟ್ಟಿದ ಇನ್ನೊಂದು ರೀತಿಯ ಭಯೋತ್ಪಾದನೆ ಎಂದರೆ ಅದು ನಕ್ಸಲಿಸಂ ಸಮಾನತೆಗಾಗಿ ಹೋರಾಟ ಮಾಡುವ ಸಮಾಜವು ವಿಕೃತಗೊಂಡು ಹಿಂಸಾ ವಾದಕ್ಕೆ ಇಳಿದ ರೀತಿ ನಿಜವಾಗಿಯೂ ನಿರಾಶಾದಾಯಕ. ಜನರ ಒಳಿತಿಗಾಗಿ ಹುಟ್ಟಿದ ಗುಂಪೆÇಂದು ಅಂತಹ ಸಮಾನ ಮನಸ್ಕರ ಸೇರುವಿಕೆಯಿಂದ ಬಲಿಷ್ಠಗೊಂಡು ಕ್ರಮೇಣ ಹಾದಿ ತಪ್ಪಿ ಹಿಂಸಾ ಪ್ರವೃತ್ತಿ ಹಿಡಿದಿರುವುದು ನಿಜಕ್ಕೂ ದುರಾದೃಷ್ಟಕರ. ಇತ್ತ ಜನಪರವೂ ಅಲ್ಲದೆ ಅತ್ತ ಸಿದ್ಧಾಂತಪರವೂ ಅಲ್ಲದೆ ಸಿಕ್ಕ ಸಿಕ್ಕವರನ್ನು ಹಿಂಸಿಸುತ್ತಾ ತಮ್ಮ ನೈಜ ಧ್ಯೇಯವನ್ನೇ ಕಳೆದುಕೊಂಡು ಭಯೋತ್ಪಾದಕರು ಎಂಬ ಹಣೆಪಟ್ಟಿಯೊಂದಿಗೆ ಆರಕ್ಷಕರ ಕಣ್ಣು ತಪ್ಪಿಸಿ ದಟ್ಟ ಅರಣ್ಯಗಳಲ್ಲಿ ಓಡಾಡುತ್ತಾ ಜನಪರ ಎಂಬ ಭ್ರಮೆಯೊಂದಿಗೆ ಜನರಿಗೆ ಇನ್ನಿಲ್ಲದ ಹಿಂಸೆ ನೀಡುವುದೇ ನಕ್ಸಲ್ ಭಯೋತ್ಪಾದನೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದ ಮೇಲೆಯೂ ನಾವು ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ಬಹು ಮುಖ್ಯ ಸಂಗತಿ ಎಂದರೆ ಧಾರ್ಮಿಕ, ಸಾಮಾಜಿಕ ಕಾರಣ ಏನೇ ಇರಲಿ, ಮುಖ್ಯವಾದ ಮತ್ತು ಅತಿ ಸೂಕ್ಷ್ಮವಾದ ಕಾರಣವೇನೆಂದರೆ ಅದು ಬಡತನ ಹಾಗೂ ಅನಕ್ಷರತೆ. ಬಡವನು ಹಣದ ಆಸೆಗಾಗಿ ಇಂತಹ ತಪ್ಪು ಹೆಜ್ಜೆ ಇಟ್ಟರೆ ಅನಕ್ಷರಸ್ತನು ತನಗೆ ಅರಿವಿಲ್ಲದೆ ಇಂತಹ ಜಾಲದಲ್ಲಿ ಸಿಲುಕುತ್ತಾನೆ. ಹಣದ ಆಸೆ ತೋರಿಸುವವನು ಬಡವನ ಇಡೀ ಸಂಸಾರವನ್ನು ಕಷ್ಟ ಬಾರದ ಹಾಗೆ ನೋಡಿಕೊಳ್ಳುವೆ ಎಂದಾಗ ಸಹಜವಾಗಿಯೇ ನಿಷ್ಠೆಯಿಂದ ಅವನು ಒಪ್ಪಿಸಿದ ಕೆಲಸ ಸರಿಯೋ ತಪೆÇ್ಪೀ ಎಂಬ ವಿವೇಚನೆ ಇಲ್ಲದೆ ಅದನ್ನು ಮಾಡಲು ಸಿದ್ಧನಾಗುತ್ತಾನೆ. ಒಬ್ಬ ವಿದ್ಯೆ ಇಲ್ಲದವನನ್ನು ಪಳಗಿಸುವುದು ಇನ್ನೂ ಸುಲಭ. ಪ್ರಪಂಚದ ಜ್ಞಾನವಿಲ್ಲದ ಒಬ್ಬ ವ್ಯಕ್ತಿಯನ್ನು ತನ್ನೆಡೆಗೆ ಸೆಳೆಯುವುದು ಒಬ್ಬ ಬುದ್ಧಿವಂತನಿಗೆ ಕಣ್ಣು ಮಿಟುಕಿಸಿದಷ್ಟೇ ಸಲೀಸು. ಅನಕ್ಷರತೆ, ಬಡತನ, ಹಾಗೂ ನಿರುದ್ಯೋಗಗಳು ಯಾವ ರೀತಿ ದೇಶದ ಸುರಕ್ಷತೆಗೆ ಇಂದಿನ ಕಾಲದಲ್ಲಿ ಮಾರಕ ಎಂದರೆ ಈ ಎಲ್ಲಾ ಅನಿಷ್ಟಗಳು ನಿದ್ರಿಸುತ್ತಿರುವ ಟೈಂ ಬಾಂಬ್‍ಗಳಂತಹವು. ನಿರುದ್ಯೋಗಿ, ಅನಕ್ಷರಸ್ತ, ಹಾಗೂ ಬಡವನಿಗೆ ಒಂದು ಹೊತ್ತಿನ ಊಟ, ಅವನ ಕುಟುಂಬಕ್ಕೊಂದಿಷ್ಟು ಆರ್ಥಿಕ ಭದ್ರತೆ ದೊರೆಯುವುದೆಂದರೆ ಆತ ಎಂತಹ ಅಪಾಯವನ್ನೂ ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಿದ್ಧನಿರುತ್ತಾನೆ. ಪ್ರಪಂಚದಾದ್ಯಂತ ಅಕ್ಟೋಪಸ್‍ಗಳಂತೆ ತಮ್ಮ ಕಬಂಧಬಾಹುಗಳನ್ನು ಚಾಚಿಕೊಂಡಿರುವ ಭಯೋತ್ಪಾದಕ ಸಂಘಟನೆಗಳು ಈ ರೀತಿಯ ವ್ಯಕ್ತಿಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡುತ್ತವೆ. ಇಂತಹ ಅತೃಪ್ತ ಸಮುದಾಯಕ್ಕೆ ಕೈಗೊಂದಿಷ್ಟು ಕಾಸು ಕೊಟ್ಟು ಅವರ ಪಾಲಿಗೆ ದೇವರಂತೆ ಕಂಡು ಅವರನ್ನು ತಮ್ಮ ವಿಕೃತ ಕೃತ್ಯಗಳಿಗೆ ಬಳಸುವ ಕೈಗೊಂಬೆಗಳನ್ನಗಿಸುತ್ತವೆ.

ವಿಪರ್ಯಾಸವೆಂದರೆ ಕೇವಲ ಈ ರೀತಿಯ ಅನಕ್ಷರಸ್ತ ನಿರುದ್ಯೋಗಿ ಬಡ ಸಮುದಾಯ ಮಾತ್ರವಲ್ಲ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಲಕ್ಷಾಂತರ ಸಂಬಳತರುವ ಉದ್ಯೋಗದಲ್ಲಿರುವವರೂ ಕೂಡಾ ಈ ವಿಷಜಾಲಕ್ಕೆ ಬಲಿ ಬೀಳುತ್ತಾರೆ. ಇಲ್ಲಿ ಈ ರೀತಿಯ ಗುಂಪನ್ನು ಆಕರ್ಷಿಸಲು ಬಳಸುವ ಏಕಮೇವ ಆಮಿಷವೆಂದರೆ ಅದು ಧರ್ಮದ ಅಫೀಮು. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ಇರಾಕ್ ದೇಶದ ನಂತರ ಸಾಮೂಹಿಕ ಹತ್ಯೆಗಳಿಂದಾಗಿ ಎರಡನೇ ಸ್ಥಾನದಲ್ಲಿರುವ ದೇಶ ಭಾರತ! ಈ ರೀತಿಯ ಭಯೋತ್ಪಾದನೆಯ ನೇರ ಪರಿಣಾಮವಾಗುವುದು ದೇಶದ ಎಲ್ಲಾ ವರ್ಗದ ನಾಗರಿಕರ ಮೇಲೆ. ಇದರಿಂದಾಗಿ ಅವರು ಯಾವಾಗಲೂ ತಮ್ಮ ಜೀವಕ್ಕೆ ಎಂದು ಏನಾಗುವುದೋ ಎಂಬ ಆತಂಕದಿಂದಲೇ ಜೀವಿಸಬೇಕಾಗುತ್ತದೆ. ಇದರ ದೀರ್ಘಾವದಿ ಪರಿಣಾಮವು ದೇಶದ ಆರ್ಥಿಕತೆ. ವಾಣಿಜ್ಯ – ವ್ಯವಹಾರ ಹಾಗೂ ಮುಖ್ಯವಾಗಿ ಪ್ರವಾಸೋದ್ಯಮದ ಮೇಲಾಗುತ್ತದೆ. ನಾವು ಹಲವಾರು ಸಂದರ್ಭಗಳಲ್ಲಿ ಕೇಳಿರಬಹುದು ಅಥವಾ ಓದಿರಬಹುದು ಅಮೇರಿಕ ಇಂಗ್ಲೆಂಡ್‍ಗಳಂತಹ ದೇಶಗಳು ತಮ್ಮ ಪ್ರಜೆಗಳಿಗೆ ಕೆಲವು ದೇಶಕ್ಕೆ ಭೇಟಿ ನೀಡುವುದರ ಬಗ್ಗೆ ಎಚ್ಚರಿಸುತ್ತಿರುತ್ತದೆ. ಇದಕ್ಕೆ ಕಾರಣ ಅವರಿಗೆ ಅವರ ಪ್ರಜೆಗಳ ರಕ್ಷಣೆಯ ಬಗ್ಗೆ ಇರುವ ಚಿಂತೆ ಇವೆಲ್ಲದರ ಪರಿಣಾಮವಾಗಿ ಆ ದೇಶದ ಪ್ರವಾಸೋದ್ಯಮದಿಂದ ಹಿಡಿದು ಆರ್ಥಿಕ, ವ್ಯಾಪಾರ ವಹಿವಾಟು ಸೇರಿ ನೆರೆ ದೇಶಗಳೊಂದಿಗಿನ ಸಂಭಂದಕ್ಕೂ ಹಾನಿಯುಂಟಾಗುತ್ತದೆ.

ಈಗ ಎಲ್ಲರಲ್ಲಿ ಮೂಡುವ ಪ್ರಶ್ನೆಯೆಂದರೆ ಭಯೋತ್ಪಾದನೆಯ ಗುರಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಭಯೋತ್ಪಾದನೆಯನ್ನೇ ನಿಗ್ರಹಿಸುವುದು ಹೇಗೆ? ಭಯೋತ್ಪಾದನೆಯನ್ನು ಎಂದೂ ಭಯೋತ್ಪಾದನೆಯಿಂದ ನಾಶ ಮಾಡಲು ಸಾಧ್ಯವಿಲ್ಲ. ಕಣ್ಣಿಗೆ ಪ್ರತಿಯಾಗಿ ಕಣ್ಣು ಎಂಬ ಹಮುರಾಬ್ಬಿಯ ತತ್ವವನ್ನು ಪಾಲಿಸಿದರೆ ಇಡೀ ಲೋಕವೇ ಬೆಂಕಿಗೆ ಆಹುತಿಯಾಗುತ್ತದೆ. ಏಕೆಂದರೆ ಭಯೋತ್ಪಾದನೆ ಬಡವರ ಯುದ್ಧವಾದರೆ, ಯುದ್ಧವು ಉಳ್ಳವರ ಭಯೋತ್ಪಾದನೆಯಾಗಿದೆ. ಇದರಿಂದ ನಾಶವಾಗುವುದು ಮುಗ್ಧರು ಮಾತ್ರ. ಇಂತಹ ಉಗ್ರರನ್ನು ಕೊಲ್ಲುವುದರಿಂದ ಇದಕ್ಕೆ ಪರಿಹಾರ ಸಿಗುವುದಿಲ್ಲ. ಏಕೆಂದರೆ ಅವರು ವಿವಿಧ ಕಾರಣಗಳಿಂದ ಸಾವಿಗೆ ಸಿದ್ಧರಾಗಿಯೇ ಬಂದಿರುತ್ತಾರೆ. ಯಾವ ಕಡೆಯೇ ಸಾವು ನೋವಾದರೂ ಅದು ಸಾಮಾನ್ಯನ ಧೃತಿಗೆಡಿಸುತ್ತದೆಯೇ ವಿನಃ ಭಯೋತ್ಪಾದಕರದಲ್ಲ. ಒಬ್ಬ ಉಗ್ರ ಸತ್ತರೆ ಅಂತಹ ಹತ್ತು ಮಂದಿ ಕ್ಷಣಾರ್ಧದಲ್ಲಿ ಹುಟ್ಟಿ ಬರುತ್ತಾರೆ. ಇವೆಲ್ಲವನ್ನು ಗಮನಿಸಿದರೆ ನಮ್ಮ ಮೊದಲ ಆದ್ಯತೆಯು ಅಪರಾಧಿಯನ್ನು ಕೊಲ್ಲುವುದಕ್ಕಿಂತ ಅಪರಾಧವನ್ನು ಕೊಲ್ಲುವುದಾಗಬೇಕು. ನೊಯಮ್ ಚೋಮ್ಸ್ ಹೇಳುವ ಪ್ರಕಾರ ಇದನ್ನು ತಡೆಯುವ ಸುಲಭ ವಿಧಾನವೆಂದರೆ ಇದರಲ್ಲಿ ಭಾಗವಹಿಸದಿರುವುದು ನಿಜವಾಗಿಯೂ ಮಾಡಬೇಕಾದದ್ದು ಒಂದು ಶಾಂತಿಯುತ ಪ್ರತಿಭಟನೆ. ಭಯೋತ್ಪಾದನೆಯ ಕಡೆಗೆ ಸೆಳೆಯಲ್ಪಟ್ಟ ಯುವಕರನ್ನು ಇದರ ಕಡೆಗೆ ವಿಮುಖರನ್ನಾಗಿಸುವ ಪ್ರಯತ್ನಗಳು ಸರಕಾರದ ಕಡೆಯಿಂದ ಆಗಬೇಕು. ತಮ್ಮ ಇಡೀ ಸಮಯ ಹಾಗೂ ಹಣವನ್ನು ಇಂತಹ ಉಗ್ರ ಸಂಘಟನೆಗಳ ನಾಶಕ್ಕಾಗಿಯೇ ವ್ಯಯಿಸುವುದರ ಬದಲು ಇದರ ಮೂಲವನ್ನೇ ನಿಗ್ರಹಿಸುವಂತಹ ಪ್ರಚಾರ ಕಾರ್ಯಗಳನ್ನು ಹೆಚ್ಚುಗೊಳಿಸಬೇಕು ಏಕೆಂದರೆ “ಉಪಶಮನಕ್ಕಿಂತ ಪ್ರತಿಬಂಧವೇ ಲೇಸು” ಸರಕಾರಕ್ಕೆ ಈ ನಿಟ್ಟಿನಲ್ಲಿ ಸಹಕರಿಸುವವರಿಗೆ ಸೂಕ್ತ ಬಹುಮಾನ ನೀಡಿ ಗೌರವಿಸಬೇಕು. ಇದು ಇನ್ನಷ್ಟು ಮಂದಿಯನ್ನು ಪ್ರೇರೇಪಿಸುತ್ತದೆ. ಕಡೆಯದಾಗಿ ಹಗೂ ಮುಖ್ಯವಾದ ಸಂಗತಿ ಎಂದರೆ ಪ್ರತಿಯೊಬ್ಬನ ಆದ್ಯ ಕರ್ತವ್ಯವೂ ಆಗಿರುವುದು ತನ್ನ ಆತ್ಮ ಸಾಕ್ಷಿ ಹೇಳಿದಂತೆ ನಡೆದುಕೊಂಡು ಸರಿ ತಪ್ಪುಗಳ ವಿಮರ್ಶೆ ಮಾಡುವುದು ಇದರಿಂದಾಗಿ ಇಡೀ ಸಮಾಜವು ಒಟ್ಟಾಗಿ ಈ ಭಯೋತ್ಪಾದನಾ ದೈತ್ಯವನ್ನು ದಮನಿಸಬಹುದು.

ಧಾರ್ಮಿಕ ಭಯೋತ್ಪಾದನಾ ಸಂಘಟನೆಗಳು ಪರಲೋಕದ ಬಗೆಗಿನ ಇಲ್ಲ ಸಲ್ಲದ ವೈಭೋಗಗಳನ್ನು ವೈಭವೀಕರಿಸಿ ಮನಸ್ಸನ್ನೇ ವಶೀಕರಿಸಿ ಸುಶಿಕ್ಷಿತ ಯುವ ಜನಾಂಗವನ್ನು ಅಡ್ಡದಾರಿಗೆಳೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹೊಟ್ಟೆ ಪಾಡಿಗೆ ಭಯೋತ್ಪಾದಕರೆನಿಸಿಕೊಳ್ಳುವ ಅಶಿಕ್ಷಿತ ಭಯೋತ್ಪಾದಕರಿಗಿಂತ ಈ ರೀತಿಯ ಸುಶಿಕ್ಷಿತ ಭಯೋತ್ಪಾದಕರು ಹೆಚ್ಚು ಅಪಾಯಕಾರಿಗಳು. ಆಧುನಿಕ ಜಗತ್ತಿಗೆ ಅನಿವಾರ್ಯವೆನಿಸಿದ ಮುಂದುವರೆದ ತಂತ್ರಜ್ಞಾನವು ಈ ವರ್ಗದ ಕೈಯಲ್ಲಿರುವ ಮಾರಕ ಅಸ್ತ್ರವಾಗಿದೆ. ಇವುಗಳ ನೆರವಿನಿಂದಲೇ ಈ ಮಂದಿ ನಾಗರಿಕ ರಕ್ಷಣಾ ವ್ಯವಸ್ತೆಗೆ ಸಡ್ಡುಹೊಡೆಯುತ್ತಾರೆ. ತಮ್ಮದೇ ದೇಶದ ಸವಲತ್ತುಗಳನ್ನು ಪಡೆದುಕೊಂಡು ಶಿಕ್ಷಿತರಾಗಿ ಆ ಶಿಕ್ಷಣವನ್ನು ಅದೇ ದೇಶದ ವಿನಾಶಕ್ಕಾಗಿ ಬಳಸುವುದು ಅತ್ಯಂತ ಹೇಯ ದುರಂತ ಮಾತ್ರವಲ್ಲ, ಎದೆಹಾಲುಣಿಸಿ ಬೆಳೆಸಿದ ತಾಯಿಯ ಎದೆಗೇ ಚಾಕು ಹಾಕುವ ನೀಚ ಕೃತ್ಯ.

ಆದರೆ ಭಯೋತ್ಪಾದನೆಯ ಕಪ್ಪು ಮೋಡದ ನಡುವೆಯೂ ನಮ್ಮ ಭಾರತದಂತಹ ದೇಶಗಳಿಗೆ ಬೆಳ್ಳಿ ರೇಖೆಗಳಂತೆ ಗೋಚರಿಸುತ್ತಿರುವುದು ಸಾವಿರಾರು ವರ್ಷಗಳಿಂದ ನಾವು ಪಾಲಿಸಿಕೊಂಡು ಬರುತ್ತಿರುವ “ವಿವಿಧತೆಯಲ್ಲಿ ಏಕತೆ” ಎಂಬ ತಾರಕ ಮಂತ್ರ. ಭಾರತದಂತಹ ದೇಶದಲ್ಲಿ ವಾಸಿಸುತ್ತಿರುವ ವಿವಿಧ ಜಾತಿ, ಮತ, ಪಂಥಗಳ ಕೋಟ್ಯಾಂತರ ಮಂದಿಯ ಹೃದಯದಲ್ಲಿ ಅಂತರ ಗಂಗೆಯಂತೆ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿರುವ ಭಾರತೀಯ ಸಂಸ್ಕೃತಿ, ಸಾಮರಸ್ಯಗಳ ಜೀವನದಿ. ಇಂದು ಕೂಡಾ ಭಾರತದಲ್ಲಿ ಮಹಮ್ಮದನ ಮನೆಯ ಮಗು ಅನಾರೋಗ್ಯಕ್ಕೀಡಾದರೆ ಪಕ್ಕದ ಮನೆಯ ರಾಮಣ್ಣ ತನ್ನ ಕಾರಿನಲ್ಲಿ ಆಸ್ಪತ್ರೆಗೊಯ್ಯುತ್ತಾನೆ. ಯಾರೂ ಇಲ್ಲದ ರಾಮಣ್ಣನ ಮನೆಯ ದನ ಕರುಗಳಿಗೆ ಲೂಯಿಸ್ ಡಿ`ಸೋಜಾ ಹುಲ್ಲು ನೀರಿತ್ತು ಸಾಕುತ್ತಾನೆ. ವೆಂಕಪ್ಪನ ಹೆಂಡತಿ ಕಮಲಳಿಗೆ ಹೆರಿಗೆ ಕಷ್ಟವಾದರೆ ಊರಿನ ಹಿರಿಯಜ್ಜಿ ಬೀಪಾತುಮ್ಮ ಸುಸೂತ್ರ ಹೆರಿಗೆ ಮಾಡಿಸುತ್ತಾರೆ. ಇದು ನಮ್ಮ ಸಂಸ್ಕೃತಿ, ಇದು ನಮ್ಮ ಭಾರತೀಯ ಸಮಾಜದ ರೀತಿ ನೀತಿ. ಇಂತಹ ಸುಭದ್ರ ಸಾಮರಸ್ಯವನ್ನು ಹೊಂದಿದ ನಮ್ಮ ದೇಶದಲ್ಲಿ ಎಂದೆಂದಿಗೂ ದ್ರೋಹಿಗಳ, ಪಿತೂರಿಗಾರರ ಬೇಳೆ ಬೇಯದು. ಯಾವುದೇ ರೀತಿಯ ಆಟ ನಡೆಯದು ಪ್ರಕರ ಸೂರ್ಯನಿಗೂ ಕೂಡಾ ಒಮ್ಮೊಮ್ಮೆ ಕರಿಮೋಡ ಮುಸುಕಿರಬಹುದು ಆದರೆ ಎಷ್ಟಿದ್ದರೂ ಅದು ತಾತ್ಕಾಲಿಕ, ಮೋಡ ಸರಿಯಲೇಬೇಕು, ಬೆಳಕು ಬರಲೇಬೇಕು, ಸೂರ್ಯ ಪ್ರಕಾಶಿಸಲೇಬೇಕು. ಇದು ಜಗದ ನಿಯಮ, ಭಾರತೀಯ ಸಂಸ್ಕೃತಿಯ ವಿಕ್ರಮ.

ಭಾನುವಾರ, ಮಾರ್ಚ್ 29, 2015

ನನ್ನ ಕನಸಿನ ಭಾರತ



ಸುಹಾನ ಫಾತಿಮ     ಹೇಂತಾರ್
ನಿಕ್ಷೇಪ 2014-15 ನಲ್ಲಿ ಸಮಾಧಾನಕರ ಬಹುಮಾನ ಪಡೆದ ಲೇಖನ #3#


ಪ್ರಸಕ್ತ ನನ್ನ ದೇಶದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಕಾರಣ ನಾನು ಜನ್ಮ ಕಳೆದಂತಹ ಭೂಮಿಯು ಇದಾಗಿದೆ. ಜನನೀ ಜನ್ಮ ಭೂಮಿ ಸ್ವರ್ಗದಪಿಗರೀಯಸಿ ಎಂಬುದೊಂದು ಶ್ಲೋಕವನ್ನು ನಾವು ರಾಮಾಯಣದಲ್ಲಿ ಕಾಣಬಹುದು. ಅದೇ ರೀತಿಯಲ್ಲಿ ಜನ್ಮ ಭೂಮಿಯನ್ನು ಪ್ರೀತಿಸದವನು ಸತ್ಯ ವಿಶ್ವಾಸಿಯಲ್ಲವೆಂಬುದು ಪ್ರವಾದಿ ಮಹಮ್ಮದ್ ಪೈಗಂಬರ್ನವರ ವರನುಡಿಯಾಗಿದೆ.

ಆದರೆ ನನ್ನ ಭಾರತವು ಪರಕೀಯರ ಆಡಳಿತಕ್ಕೊಳಪಟ್ಟು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ದೇಶ ಪ್ರೇಮಿಗಳು ತನ್ನ ತನು, ಮನ, ಧನ, ಪ್ರಾಣಗಳನ್ನು ಅರ್ಪಿಸಿದ ಚರಿತ್ರೆಯು ಕಾಲಚಕ್ರದಲ್ಲಿ ಅಡಗಿದೆ. ಆದರೆ ಪ್ರಸಕ್ತ ರಾಷ್ಟ್ರವನ್ನು ಪರಿಶೀಲಿಸಿದರೆ, ತ್ಯಾಗವು ಮರೆಯಾಗಿ ಭೋಗದ ಜೀವನ ಶೈಲಿಯನ್ನು ಕಾಣಬಹುದಾಗಿದೆ. ಅಂದು ದೇಶಕ್ಕೆ ಎಲ್ಲವನ್ನೂ ಕೊಟ್ಟವರು ಹಲವರು. ಇಂದು ದೇಶದ ಸಂಪತ್ತನ್ನೇ ಲೂಟಿ ಮಾಡುವವರು ಸಾವಿರಾರು ಜನರು.

ಭಾರತ ದೇಶವು ಜಗತ್ತಿನಲ್ಲಿಯೇ ಶೋಭಿತವಾಗಬೇಕು. ಜಗತ್ತಿನ ಎಲ್ಲಾ ಜನರು ನನ್ನ ಭಾರತವನ್ನೂ ಕಂಡು ಕಲಿಯಬೇಕು. ಯಾಕೆಂದರೆ ಪುರಾತನ ಕಾಲದಲ್ಲೇ ಭಾರತವು ಜ್ಞಾನ ಭೂಮಿಯಾಗಿತ್ತು. ಕಗೋಲ ಶಾಸ್ತ್ರ. ಶೂನ್ಯದ ಬಳಕೆ, ಆಯುರ್ವೇದ ಚಿಕಿತ್ಸಾ ಕ್ರಮ, ಶಿಲ್ಪಕಲೆ, ಜಗತ್ತಿಗೆ ನಾವು ಕೊಟ್ಟಿದ್ದೇವೆ.

ಭಾರತೀಯ ಜನರಿಗೆ ಆರೋಗ್ಯವು ದೊರಕುವಂತಾಗಬೇಕು. ಸ್ವಚ್ಚ ಆಹಾರದ ತಯಾರಿಕೆಯು ನಮ್ಮದಾಗಿದ್ದು ಹೃದಯ ಕಾಯಿಲೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮೊದಲಾದ ರೋಗಗಳಿಂದ ಮುಕ್ತರಾಗುವಂತೆ ನನ್ನ ಕನಸಾಗಿದೆ.
ಸ್ತ್ರೀಯರ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಪಡದಂತೆ, ಜಾಗೃತರಾಗಿರಬೇಕು. ಪುರುಷ ವರ್ಗವು ಸಚ್ಚಾರಿತ ಹಾಗೂ ನೀತಿಯುತವಾಗಿ ಬದುಕುವ ಕಲೆ ಹಾಗೂ ಸ್ತ್ರೀ ಗೌರವದ ಮನಸ್ಥಿತಿಯನ್ನು ಹೊಂದಿಕೊಂಡು ಅತ್ಯಚಾರದ ಮೂಲೋತ್ಪಾದನೆಯಾಗಬೇಕು. ಮಧ್ಯ ರಾತ್ರಿಯಲ್ಲಿ ಮಾಲಿನಿಯರು ಯಾವುದೇ ಮಾರ್ಗದಲ್ಲಿ ಧೈರ್ಯವಾಗಿ ನಡೆಯುವಂತಹ ಸಮಯವೇ ಸಂಪೂರ್ಣ ಸ್ವಾತಂತ್ರ್ಯದ ಅನುಭವಾಗಿದೆ. ಖಲೀಪ ಉಮರರ ರಾಜ್ಯಾಡಳಿತ ಕಾಲದಲ್ಲಿ ಸ್ತೀಯರು ಮಧ್ಯರಾತ್ರಿಯಲ್ಲಿ ಯಾವುದೇ ಭಯವಿಲ್ಲದೇ, ನಡೆದಾಡುತ್ತಿದ್ದಾರೆಂದು ಚರಿತ್ರೆಯಾಗಿದೆ. ಇದೇ ಕನಸನ್ನು ಮಾಹಾತ್ಮಾಜಿಯವರು ಕಂಡಿದ್ದರು.

ಯುವ ಶಕ್ತಿಯು ಮಾದಕ ದ್ರವ್ಯಗಳ ಗುಲಾಮರಾಗಿ, ತನ್ನ ಜೀವನವನ್ನು ದುಃಖಮಯಗೊಳಿಸುತ್ತಿದ್ದಾರೆ. ಆದುದರಿಂದ ಎಲ್ಲಾ ಮಾದಕ ದ್ರವ್ಯ ಹಾಗೂ ಮದ್ಯಪಾನ ಮುಕ್ತವಾದ ಭಾರತವು ನನ್ನ ಕನಸಿನದ್ದಾಗಿದೆ.ಇನ್ನೊಂದು ರಾಷ್ಟ್ರೀಯ ಸಮಸ್ಯೆಯೆಂದರೆ ಕೋಮುವಾದ ಜಾತಿ ಧರ್ಮಗಳಲ್ಲಿ ಪರಸ್ಪರ ದ್ವೇಷ, ಅಸೂಯೆ, ಹಿಂದೂ ಮುಸ್ಲಿಮರೆಂಬ ಬೇಧ ಭಾವದ ಕಲಹ ಎಲ್ಲಯೂ ಅಳಿಯಬೇಕು. ಎಲ್ಲ ಭಾರತೀಯರೂ ಏಕೋದರ ಸಹೋದರರಂತೆ ವರ್ತಿಸಿ, ರಾಷ್ಟ್ರೀಯ ಕಾರ್ಯದಲ್ಲಿ ಮಗ್ನರಾಗಬೇಕು.

ಭಾರತೀಯರಿಗೆ ಸರಿಯಾದ ವಿದ್ಯಾಭ್ಯಾಸವು ದೊರಕುವಂತೆ ಆಗಬೇಕು. ಆರ್ಥಿಕ ತೊಡಕಿನಿಂದಾಗಿ ಯಾವುದೇ ಭಾರತೀಯರಿಗೆ ವಿದ್ಯಾವಂಚನೆಯಾಗಬಾರದು ಹಾಗೂ ಜನ ಶಕ್ತಿಯನ್ನೂ ದೇಶದ ಸೇವೆಗಾಗಿ ಉಪಯೋಗಿಸಿಕೊಳ್ಳುವಂತಾಗಬೇಕು. ವೈಜ್ಞಾನಿಕ ರಂಗದಲ್ಲಿ ದೇಶವು ಪ್ರಗತಿಯನ್ನು ಕಾಣಬೇಕು. ಹಾಗೂ ಯುವ ವಿಜ್ಞಾನಿಗಳನ್ನು ತಯಾರು ಮಾಡುವಂತೆ ಆದಷ್ಟು ಪ್ರೋತ್ಸಾಹಿಸಬೇಕು. ಭಾರತೀಯರಲ್ಲಿ ಪರಸ್ಪರ ಐಕ್ಯಮತ್ಯ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸಿ, ಜಗತ್ತಿನಲ್ಲಿ ಶ್ರೇಷ್ಠ ಭಾರತದ ಕನಸು ನನ್ನದಾಗಿದೆ.


 ಕವನ
ಪ್ರಸಕ್ತ ನನ್ನ ಕನಸಿನ ಭಾರತ|
ನೀನು ಜಗದ ಮುಕುಟು ಮಣಿ ಎನ್ನುತ|
ನಿನ್ನ ಒಡಲಲ್ಲಿ ಬೆಳೆದು ಬಂದ ಜ್ಞಾನ|
ಜಗಕೆ ನೀನೆಂದೂ ಸತ್ಯವೆಂಬ ಪ್ರಾಣ|
ಸಕಲ ಜನರೆಲ್ಲಾ ಒಂದಾಗಿ ಕಳೆದು|
ದ್ವೇಷ ರೋಶ ಭಾವನೆಯು ತೊರೆದು|
ಸೋದರತೆಯ ಚಿಂತನೆಯು ಮೂಡಿಬರಲಿ|
ಜಾತಿ, ಕೋಮು ಭಾವನೆಯು ಅಳಿದು ಹೋಗಲಿ|
ಎಲ್ಲ ಯುವ ಜನತೆಗೆ ಸರಿಯಾದ ಉದ್ಯೋಗ|
ಭರತ ಭೂಮಿಯಲಿ ಇರಲಿ ದೇಶಕ್ಕಾಗಿ ತ್ಯಾಗ|
ಅಳಿದು ಹೋಗಲಿ ಸ್ತ್ರೀ ಮೇಲಾಗುವ ಅತ್ಯಾಚಾರ|
ಬೆಳೆದು ಬರಲಿ ಮಹಿಳಾ ಗೌರವ ಆದರ|
ಕಳ್ಳತನ ಕೊಲೆ ಸುಲಿಗೆಗಳು ಅಳಿದು|
ಸತ್ಯಾ ಸಚ್ಚಾರಿತ್ರ್ಯ ನೀತಿಯೆಲ್ಲಾ ತುಂಬಿ ಬೆಳೆದು|
ಸತ್ವಯುತ ಅನ್ನವನು ನಾವೆಲ್ಲಾ ಮಾಡಿ|
ಭಾರತೀಯ ಜನಕೆ ಸ್ವಚ್ಚಾ ಆಹಾರವ ನೀಡಿ|
ರೋಗ ಮುಕ್ತ ರಾಷ್ಟ್ರ ನಮ್ಮದಾಗಬೇಕು|
ಮದ್ಯ ದಿನಗಳು ಜನರಿಗೆ ಬರಲೇಬೇಕು|
ವಿಜ್ಞಾನ ಕಲೆಗಳು ನಮ್ಮ ಬದುಕಿನ ಅಂಗ|
ಭಾರತೀಯರೆಲ್ಲಿ ಒಂದಾಗಿ ಬದುಕುವ ರಂಗ|
ಸರ್ವೇಜನಾಃ ಸುಖಿನೋ ಭವಂತು ಎಂದು|
ವಿಶ್ವಾಕುಟುಂಬದ ಕನಸು ಮೂಡಲಿ ಇಂದು


ಗುರುವಾರ, ಫೆಬ್ರವರಿ 12, 2015

ನೀಚತೆಯ ಪರಮಾವಧಿ

ಕತೆಯಲ್ಲ... ನೈಜ ಘಟನೆ...!!!
ಮುಂಬಯಿ ತಾ. 18/03/2014





ರೋಶನಿ ಹಾಗೂ ನಿಕೇತ್ ಹೊಸದಾಗಿ ಮದುವೆಯಾದ ನವ ದಂಪತಿಗಳು. ಸಾಮಾನ್ಯವಾಗಿ ಎಲ್ಲರಂತೆ ಮದುವೆಯ ಆರಂಭದ ರಸಮಯ ದಿನಗಳನ್ನು ಕಳೆಯುತ್ತಿದ್ದರು. ಬಹಳ ಪ್ರೀತಿಯಿಂದ ಹೊಸ ಸೊಸೆಯನ್ನು ನೋಡಿಕೊಳ್ಳುತ್ತಿದ್ದರು. ಅಷ್ಟೇ ಪ್ರೀತಿಯಿಂದ ಅತ್ತೆ, ಮಾವನನ್ನು ನೋಡಿ ಕೊಳ್ಳುತ್ತಿದ್ದಳು. ಇವರ ಸಂಸಾರದ ದೊಣಿ ನಗು ನಗುತ್ತಾ ಸಾಗುತ್ತಿರುವಾಗ, ಆಕಾಶವೇ ಕಳಚಿ ಬಿಳುವಂತಹ ಘಟನೆ ನಡೆಯುತ್ತದೆ.

ಒಂದು ಮುಂಜಾನೆ ಮಾವನಾದ ಬಾಬುಲಾಲ್ ಒಂದು ಸಿಡಿ ಹಾಗೂ ಪತ್ರವನ್ನು ತನ್ನ ಮಗ ಹಾಗೂ ಸೊಸೆಗೆ ತೋರಿಸಿ ಬೊಬ್ಬಿಡಲಾರಂಭಿಸುತ್ತಾರೆ. ಆ ಪತ್ರದಲ್ಲಿ ಬರೆಯಲಾಗಿತ್ತು " ಈ ಸಿಡಿಯಲ್ಲಿ ನಿಮ್ಮ ಮಗ ಹಾಗೂ ಸೊಸೆಯ ರಸಮಯ ಕ್ಷಣಗಳ ವಿಡಿಯೊ ಇದೆ. ಈ ವಿಡಿಯೊ ರಹಸ್ಯವಾಗಿರ ಬೇಕಾದರೆ 3 ದಿನದೊಳಗೆ 10 ಲಕ್ಷ ರೂಪಾಯಿ ಕೊಡ ಬೇಕು. ಇಲ್ಲಾಂದ್ರೆ ಇದನ್ನು ಇನ್ಟರ್ನೆಟ್ ನಲ್ಲಿ ಹಾಕಲಾಗುವುದು. ಹಣ ಎಲ್ಲಿಗೆ ತಲುಪಿಸಬೇಕೆಂಬ ಮಾಹಿತಿ 3 ದಿನದ ನಂತರ ತಿಳಿಸಲಾಗುವುದು." ಇದನ್ನು ಕೇಳಿ ಎಲ್ಲರೂ ದಂಗಾಗುತ್ತಾರೆ. ಇಷ್ಟು ದೊಡ್ಡ ಮೊತ್ತವನ್ನು ನಮ್ಮಿಂದ ಹೊಂದಿಸಲು ಸಾಧ್ಯವಿಲ್ಲ. ನಿಮ್ಮ ಖಾಸಗಿ ಕ್ಷಣಗಳನ್ನು ಜಾಗ್ರತೆಯಿಂದ ಕಳೆಯಬೇಕೆಂಬ ಸ್ವಲ್ಪ ಬುಧ್ಧಿ ಇಲ್ಲವೆ ನಿಮಗೆ ? ಈ ಮೊತ್ತವನ್ನು ನೀವೆ ಪತಿ ಪತ್ನಿ ಹೊಂದಿಸಿ ಕೊಳ್ಳಿ ಎಂದು ಹೇಳಿ ಹೊರಟು ಹೋಗುತ್ತಾರೆ. ಪತಿಯು ಇಷ್ಟು ದೊಡ್ಡ ಮೊತ್ತ ನನ್ನಿಂದ ಸಾಧ್ಯವಿಲ್ಲ. ಪೋಲಿಸಿಗೆ ದೂರು ಕೊಟ್ಟರೆ ನಮ್ಮ ಮಾನ ಮರ್ಯದೆಯೆಲ್ಲಾ ಹೊಗುತ್ತೆ. ನೀನೆ ಏನಾದರೂ ಮಾಡು ಎಂದು ನವ ಪತ್ನಿಯ ದುಂಬಾಲು ಬೀಳುತ್ತಾನೆ.

ಈ ಪರಿಸ್ಥಿತಿಯಲ್ಲಿ ರೋಶನಿ, ಇಂತಹ ನೀಚ ಕ್ರುತ್ಯವನ್ನು ಯಾರು ಮಾಡಲು ಸಾಧ್ಯ ಎಂದು ಯೋಚಿಸುತ್ತಿರುವಾಗಲೆ, ತನ್ನ ಹಳೇಯ ಪ್ರೇಮಿ ಮಹೇಂದ್ರನ ಚಿತ್ರ ಅವಳ ಮನಸ್ಸಿನ ಮುಂದೆ ಹಾದು ಹೋಗುತ್ತದೆ. ಆ ಕೂಡಲೇ ತನ್ನ ತವರು ಮನೆಗೆ ಹೋಗಿ "ನನಗೆ ಈಗಲೇ 10 ಲಕ್ಷ ರೂಪಾಯಿಯ ಅಗತ್ಯವಿದೆ. ಏಕೆ ಎಂದು ಕೇಳ ಬೇಡಿ. ನಿಮಗೂ ನಿಮ್ಮ ಮಗಳ ಮೇಲೆ ಪ್ರೀತಿಯಿದೆ ಎಂದು ಭಾವಿಸಿ ಕೇಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ ಎಂದು ಅಂಗಲಾಚುತ್ತಾಳೆ. ಆಗ ತಂದೆ ಕೇಳುತ್ತಾರೆ " ಏನಾಯಿತು? ಪತಿ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಾರೆಯೆ?" ಅದಕ್ಕವಳು "ಇಲ್ಲಾ.. ನನಗೆ ಬೇರೆಯದೆ ಅಗತ್ಯವಿದೆ." ಅದಕ್ಕವರು ಮರು ಮಾತನಾಡದೆ ಸದ್ಧ್ಯಕ್ಕೆ 5 ಲಕ್ಷ ರೂಪಾಯಿಯನ್ನು ಮಗಳಿಗೆ ಕೊಡುತ್ತಾರೆ.

ಆ ಹಣವನ್ನು ಸಂಶಯದ ಮೇಲೆ, ನೇರ ತನ್ನ ಹಳೇಯ ಪ್ರೇಮಿಯ ಮನೆಗೆ ಹೊಗುತ್ತಾಳೆ. ಮನೆ ಬಾಗಿಲಿನಲ್ಲಿ ರೋಶನಿಯನ್ನು ಕಂಡು, ಬಾಗಿಲು ಹಾಕಿ ಒಳಗೆ ಬಂದು, ರೋಶನಿಯ ಫೊಟೊಗಳನ್ನು ಚೊಕ್ಕದಾಗಿ ಗೋಡೆಯ ಮೇಲೆ ತೂಗು ಹಾಕಿರುತ್ತಾನೆ. ಅದರ ಮೇಲೆ ಅವಳಿಗೆ ತಿಳಿಯಬಾರದೆಂಬ ಉದ್ಧೇಶದಿಂದ ಒಂದು ಬಟ್ಟೆ ಹಾಕಿ ಮುಚ್ಚಿ,ನಂತರ ರೋಶನಿಯನ್ನು ಬರ ಮಾಡಿ ಕೊಳ್ಳುತ್ತಾನೆ. ಒಳಗೆ ಬಂದವಳೇ ಸಿಟ್ಟಿನಿಂದ " ಯಾಕೋ ಇಂತಹ ನೀಚ ಕೆಲಸ ಮಾಡುತ್ತಿದ್ದಿಯಾ? ನನ್ನ ಖಾಸಗಿ ಕ್ಷಣವನ್ನು ಚಿತ್ರಿಕರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿಯಾ ? ತಗೋ 5 ಲಕ್ಷ ಇದೆ. ಬಾಕಿ ಹಣ ಸ್ವಲ್ಪ ದಿನದಲ್ಲೇ ಕೊಡುವೆ" ಎಂದು ರೇಗುತ್ತಾಳೆ. ಆಗ ಅವನು ಶಾಂತವಾಗಿ ಹೇಳುತ್ತಾನೆ " ನಾನು ನಿನ್ನನ್ನು ಕೇವಲ ಪ್ರೀತಿದ್ದಲ್ಲ,ಬದಲಾಗಿ ನಿಶ್ಕಲ್ಮಶವಾಗಿ ಪೂಜಿಸಿದ್ದೇನೆ. ನಂಬಿಕೆ ಇಲ್ಲದ್ದಿದ್ದರೆ,ಇಗೋ ನೋಡು" ಎಂದು ಅವಳ ಫೊಟೊಗಳ ಮೇಲೆ ಹಾಕಿದ್ದ ಬಟ್ಟೆ ಸರಿಸಿ ತೋರಿಸುತ್ತಾನೆ. ಅದನ್ನು ಕಂಡು ಕಣ್ಣೀರಿನೊಂದಿಗೆ. ಮತ್ಯಾರು ಈ ಕೆಲಸ ಮಾಡಿರ ಬಹುದು ಎಂದು ಯೋಚಿಸುತ್ತಿರುವಾಗ .... ಮಹೇಂದ್ರ ಕೇಳುತ್ತಾನೆ... ಆ ಸಿಡಿ ಮೊದಲು ಯಾರ ಕೈಗೆ ಸಿಕ್ಕಿದ್ದು ? ನಂತರ ಏನಾಯಿತು ಎಂದು ಒಂದರ ನಂತರ ಒಂದು ಪ್ರೆಶ್ನಿಸುತ್ತಾನೆ... ನಂತರ ಪೂರ್ತಿ ವಿಷಯ ಅವಳಿಂದ ಕೇಳಿಸಿ ಕೊಂಡು, ಇಬ್ಬರೂ ಸೇರಿ ಒಂದು ಪ್ಲ್ಯಾನ್ ಮಾಡಿ. ಆ ಹಣವನ್ನು ಕೊಟ್ಟು ಅತ್ತೆ ಮನೆಗೆ ಕಳುಹಿಸಿ ಕೊಡುತ್ತಾನೆ.

ಮನೆಗೆ ಬಂದವಳೇ... ಕೇವಲ 5 ಲಕ್ಷ ಮಾತ್ರ ಹೊಂದಿಸಲು ಸಾಧ್ಯವಾಯಿತು ಎನ್ನುವಾಗ ಆಕೆಯ ಪತಿ " ಇನ್ನುಳಿದ 5 ಲಕ್ಷಕ್ಕೆ ಏನು ಮಾಡುವುದು ಎಂದು ಬೊಬ್ಬಿಡಾಲಾರಂಭಿಸುತ್ತಾನೆ. ಆಗ ಮಾವ ಸಮಾಧಾನಿಸುತ್ತಾ ಹೇಳುತ್ತಾನೆ " ಪರ್ವಾಗಿಲ್ಲಾ ಸಧ್ಯಕ್ಕೆ 5 ಲಕ್ಷ ಕೊಟ್ಟು ಸ್ವಲ್ಪ ಕಾಲಾವಕಾಶ ಕೇಳೊಣ" ಎಂದು ಆಗ ರೋಶನಿ ಸಿಟ್ಟಿನಿಂದ ಅಲ್ಲಿದ್ದ ಸಿಡಿ ಹಾಗೂ ಗಂಡನ ಲ್ಯಾಪ್ ಟಾಪ್ ನೆಲಕ್ಕೆ ಬಡಿದು ಪುಡಿಗಟ್ಟುತ್ತಾಳೆ. ಅದನ್ನು ನೋಡಿ ಸಿಟ್ಟಾದ ಗಂಡನನ್ನು ಮಾವನು ಸಮಾಧಾನಿಸುತ್ತಾನೆ.
ಅದೇ ದಿನ ರಾತ್ರಿ ನಿಕೇತ್ ತನ್ನ ಪತ್ನಿಯಲ್ಲಿ ಮಿಲನಕ್ಕಾಗಿ ಅಪೇಕ್ಷಿಸುತ್ತಾನೆ. ಆದರೆ ಅವಳು "ಇವತ್ತು ನನ್ನ ಮೂಡ್ ಸರಿ ಇಲ್ಲ... ದಯವಿಟ್ಟು ಕ್ಷಮಿಸಿ" ಎಂದು ಶೌಚಾಲಯಕ್ಕೆ ಹೊದಾಗ... ನಿಕೇತ್ ಕಿಟಕಿಯ ಬಳಿ ಬಂದು "ಇವತ್ತು ಮೂಡ್ ಇಲ್ವಂತೆ. ಇವತ್ತು ಯಾವುದೇ ಸಂಭವ ಕಾಣುತ್ತಿಲ್ಲ" ಎಂದಾಗ ಆ ಕಡೆಯಿಂದ "ಮೂಡ್ ಇಲ್ಲಾಂದ್ರೆ, ಮೂಡ್ ಬರಿಸೊ. ವಿಡಿಯೊವಿದ್ದ ಲ್ಯಾಪ್ ಟಾಪ್ ಬೇರೆ ಪುಡಿ ಮಾಡಿದ್ದಾಳೆ. ಒಂದಾದ್ರೂ ವಿಡಿಯೋದ ಈಗ ತುರ್ತು ಅಗತ್ಯವಿದೆ." ಎಂಬ ಮಾತುಕತೆ ನಡೆಯುವಾಗ, ರೋಶನಿ ಶೌಚಾಲಯದಿಂದ ಚಪ್ಪಾಳೆ ತಟ್ಟುತ್ತಾ ಹೊರಗೆ ಬಂದು "ಅಯ್ಯೋ ನೀಚರೇ ಹಣಕ್ಕಾಗಿ ಗಂಡ ಹಾಗೂ ಅತ್ತೆ ಮಾವ ಸೇರಿ ಇಂತಹ ನೀಚ ಕೆಲಸ ಮಾಡಬಹುದು ಎಂದು ಯೋಚಿಸಿರಲಿಲ್ಲ" ಎಂದು ಹೇಳಿದಾಗ ತಮ್ಮ ದುಷ್ಕ್ರುತ್ಯ ಬಯಲಾದಾಗ ಅತ್ತೆ ಮಾವ ಇಬ್ಬರೂ ಅವಳ ಕೋಣೆಗೆ ಓಡಿ ಬಂದು "ಮಗನೆ ಅವಳನ್ನು ಬಿಡ ಬೇಡ, ನಮ್ಮ ರಹಸ್ಯ ಅವಳಿಗೆ ತಿಳಿದಾಯಿತು. ಈಗ ಅವಶ್ಯವಾಗಿ ವಿಡಿಯೋದ ಅಗತ್ಯವಿದೆ ಎಂದು ಬಲವಂತದಿಂದ ಅವಳ ಬಲತ್ಕಾರಗೊಳಿಸುವ ಚಿತ್ರಿಕರಣ ನಡೆಸಲಾರಂಭಿಸುತ್ತಾರೆ. ಇದೇ ಸಮಯದಲ್ಲಿ ಅವಳ ಹಳೇಯ ಪ್ರೇಮಿ ಮಹೇಂದ್ರ ಇದೆಲ್ಲವನ್ನು ತನ್ನ ವಿಡಿಯೋ ಕ್ಯಾಮೆರಾದಲ್ಲಿ ಚಿತ್ರಿಸಿ ಜೋರಾಗಿ ಬಾಗಿಲ ಗಂಟೆ ಬಾರಿಸಿ, ಚಿತ್ರೀಕರಿಸಿದ ಸಿಡಿಯನ್ನು ಬಾಗಿಲಲ್ಲಿ ಬಿಟ್ಟು ಮೊದಲೇ ವಿಷಯ ತಿಳಿಸಿಟ್ಟಿದ್ದ ಪೋಲಿಸರನ್ನು ಕರೆ ತರಲು ಓಡುತ್ತಾನೆ. ಬಾಗಿಲಲ್ಲಿ ಗಂಟೆ ಬಾರಿಸಿದವರಾರು ಇರಲಿಲ್ಲ ಬದಲಾಗಿ ಅಲ್ಲಿ ಬಿದ್ದಿರುವ ಸಿಡಿಯನ್ನು ಎತ್ತಿ ಮಗನಲ್ಲಿ ಈ ಸಿಡಿ ಇತ್ತು ಬಾಗಿಲಲ್ಲಿ. ಏನಿದೆ ನೋಡುವ ಎಂದು ನೋಡಿದಾಗ ತಮ್ಮದೇ ದುಶ್ಕ್ರುತ್ಯ ನೋಡಿ ದಂಗಾಗಿ. ಇದು ನಿನ್ನದೇ ಕೆಲಸವಲ್ಲವೇ ಎಂದು ಅವಳನ್ನು ಕತ್ತು ಹಿಚುಕಿ ಕೊಲ್ಲಲು ಮುಂದಾಗುತ್ತಾರೆ. ಅದೇ ಸಮಯಕ್ಕೆ ಮಹೇಂದ್ರ ಪೋಲಿಸರನ್ನು ಕರೆದು ಕೊಂಡು ಸಕಾಲಕ್ಕೆ ಬಂದು ಅವಳನ್ನು ರಕ್ಷಿಸಿ ಆ ಮೂವರನ್ನು ಬಂಧಿಸುತ್ತಾರೆ.

ರೋಶನಿಯ ಗಂಡ, ಅತ್ತೆ ಹಾಗೂ ಮಾವನಿಗೆ ಮುಂಬಯಿ ನ್ಯಾಲಯವು ವಿಧಿಸಿದ ಶಿಕ್ಷೆ ಹಾಗೂ IPC ಸಂಖ್ಯೆಯನ್ನು ಈ ಕೆಳಗೆ ನೀಡಲಾಗಿದೆ.ಬಲವಂತ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕಾಗಿ ಹಾಗೂ ಅಪರಾಧಿಕ ಷಡ್ಯಂತ್ರಕ್ಕಾಗಿ... ಸೆಕ್ಶನ್498A, 339C, 120B ಯಂತೆ 7 ವರ್ಷಗಳ ಕಠಿನ ಸಜೆ ವಿಧಿಸಲಾಯಿತು.

ಮಾನವನು ಇಷ್ಟೊಂದು ನೀಚನಾಗಿರ ಬಹುದೇ ಎಂಬ ಪ್ರೆಶ್ನೆ ನಿಮ್ಮಲ್ಲೂ ಉಧ್ಭವಿಸುತ್ತಿರ ಬಹುದಲ್ಲವೇ...? ಹೌದು ಇದ್ದಾರೆ ... ನಮ್ಮ ಸಮಾಜದಲ್ಲಿ ಇನ್ನೂ ಕೂಡ ಕೆಲವರು ಹೆಣ್ಣನ್ನು ಕೇವಲ ಹಣ ಗಳಿಸುವ ಯಂತ್ರ ಎಂದು ಭಾವಿಸಿದ್ದಾರೆ. ತಮ್ಮ ದುರಾಸೆಗಾಗಿ ಯಾವ ರೀತಿಯಲ್ಲಾದರೂ ಉಪಯೊಗಿಸಲು ನಾಚುವುದಿಲ್ಲ.

ನಾವು ನಮ್ಮ ಸ್ವಂತಕ್ಕಾಗಿ ಏನಾದರೂ ಖರೀದಿಸುವಾಗ,ಆ ವಸ್ತುವನ್ನು ಸರಿಯಾಗಿ ಪರೀಕ್ಷಿಸಿ ನಂತರ ಖರೀದಿಸುತ್ತೆವೆ... ಆದರೆ ತಮ್ಮ ಮುದ್ದಿನ ಮಗಳು ಮದುವೆಯ ವಯಸ್ಸಿಗೆ ಬಂದಾಗ ಅದೇ ಮುದ್ದಿನ ಮಗಳು ತಲೆಯ ಭಾರವಾಗ ತೊಡಗುತ್ತಾಳೆ. ಯಾರಿಗಾದರೂ ತಲೆಗೆ ಕಟ್ಟಿ ಕೊಡಲು ತುದಿಗಾಲಲ್ಲಿ ಇರುತ್ತಾರೆ. ಹುಡುಗನ ಪೂರ್ವಪರ ಪರಿಶೀಲಿಸದೆ ತಲೆಯ ಭಾರವನ್ನು ಇಳಿಸುವ ಆತುರದಲ್ಲಿರುತ್ತಾರೆ. ನಂತರ ಅನುಭವಿಸುವುದು ಆ ಹೆಣ್ಣು ಜೀವ ಮಾತ್ರ…!!!

# ತಲೆಯ ಭಾರ ಇಳಿಸುವ ಆತುರದಲ್ಲಿ ಆ ಬಡ ಜೀವವನ್ನು ಯಾಕೆ ಕೈಗೊಂಬೆಯಾಗಿಸುತ್ತೀರ...???
# ಅದೇ ರೀತಿ ಮನೆಗೆ ಬಂದ ಸೊಸೆಯನ್ನು ಅಷ್ಟೊಂದು ಕ್ರೂರವಾಗಿ ಯಾಕಾಗಿ ಹಿಂಸಿಸುತ್ತೀರ...???
# ನೀವು ಪ್ರಾಣಿಗಿಂತಲೂ ಕಡೆಯಾಗಿದ್ದೀರಾ...???
# ವರದಕ್ಷಿಣೆಗೆ ಒತ್ತಾಯಿಸಿದರೆ, ಕೇಸು, ಕೋರ್ಟು ಅಂತ ಅಲೆಯ ಬೇಕಾದಿತು ಎಂದು ಈ ರೀತಿ ಸುಲಭವಾಗಿ ಹಣ ಮಾಡುವ ದುರಾಲೊಚನೆಯೆ...???

# ನಿಮ್ಮಂತವರಿಗೆ ನನ್ನ ಸಾವಿರ ಧಿಕ್ಕಾರವಿದೆ...!!!
ನಿಮ್ಮವನೇ ಆದ
-ಮುಖ್ತಾರ್ ಉಚ್ಚಿಲ

ದೆಹಲಿ ಅನುಭವ




ಗೆಳೆಯರೇ...

ಕೆಲಸದ ನಿಮಿತ್ತ ತುರ್ತಾಗಿ ದೆಹೆಲಿಗೆ ಹೋಗಬೇಕಾಗಿ ಬಂದ್ದಿದ್ದರಿಂದ, ಓರ್ವ ಗೆಳೆಯನಜೊತೆಗೂಡಿ, ಸಮಯದ ಅಭಾವದ ಕಾರಣಮಂಗಳೂರಿನಿಂದ ದೆಹಲಿಗೆ ವಿಮಾನವೇರಿದೆ. ನನ್ನದೆಹಲಿ ಪ್ರಯಾಣದಲ್ಲಾದ ಕೆಲವು ಅನುಭವಗಳನ್ನುತಮ್ಮ ಮುಂದಿಡುತ್ತಿದ್ದೆನೆ.
ಮಂಗಳೂರಿನಿಂದ ಮುಂಬಯಿ ಮುಖಾಂತರಮಧ್ಯ ರಾತ್ರಿಗೆ ದೆಹಲಿ ಪ್ರಾದೇಶಿಕ ವಿಮಾನನಿಲ್ದಾಣದಲ್ಲಿ ಇಳಿದು ಹೊರಗೆ ಬಂದಾಗ ನೂರಾರುಬಾಡಿಗೆ ಕಾರುಗಳು ನಮಗೆದುರಾದವು. ಒಬ್ಬರನಂತರ ಒಬ್ಬರು ಟ್ಯಾಕ್ಸಿ ಬೇಕಾ ಎಂದು ಕೇಳತೊಡಗಿದರು. ಪಹಾಡ್ ಗಂಜ್ ಗೆ ಹೋಗಲು ಎಷ್ಟುಚಾರ್ಜ್ ಮಾಡುವಿರಿ ಎಂದು ಕೇಳಿದಾಗ, ನಮಗೆಸಿಕ್ಕಿದ ರೇಟ್ ಗಳನ್ನು ನೀವೇ ಗಮನಿಸಿ... ಒಬ್ಬರನಂತರ ಒಬ್ಬರು – 1500/-, 1200/-, 1000/-, 800/- ಕೊನೆಗೆ 700/- ರೂಪಾಯಿಗೆ ಬಂದು ನಿಂತಿತು.ಎಲ್ಲರ ರೇಟು ಕೇಳಿದ ನಂತರ, ನಿಲ್ದಾಣದಲ್ಲಿರುವ ಪ್ರೀಪೈಡ್ ಟ್ಯಾಕ್ಸಿಯಲ್ಲಿ ವಿಚಾರಿಸಿದಾಗ ಕೇವಲ 350/-ರೂಪಾಯಿ ಎಂದು ಉತ್ತರ ಸಿಕ್ಕಿತು. ಅದನ್ನೆ ನಿಗದಿಪಡಿಸಿ ಮುನ್ನಡೆದೆವು. ದಾರಿ ಮದ್ಯೆ ಕಾರಿನಚಾಲಕನಲ್ಲಿ, ಯಾವುದಾದರೂ 2000-2500/-ರೂಪಾಯಿ ಬೆಲೆಯ ಒಳ್ಳೆಯ ಹೋಟೆಲ್ಕೊಡಿಸುವಂತೆ ಕೇಳಿದೆವು. ಅವನು ಒಂದುಹೊಟೇಲಿಗೆ ಕರೆದು ಕೊಂಡು ಹೋದ, ನಮಗಿಂತಮೊದಲು ಒಳ ಹೊಕ್ಕು "ಸಾರ್ ಗೆ ರೂಮ್ ತೋರಿಸು"ಎಂದ. ರೇಟು ಎಷ್ಟು ಕೇಳಿದರೆ "ಮೊದಲು ರೂಮ್ನೋಡಿ, ಒಪ್ಪಿಗೆಯಾದರೆ ರೇಟು ತಿಳಿಸುವೆ" ಎಂದುರೂಮ್ ಬಾಯ್ ನೊಂದಿಗೆ ಕಳುಹಿಸಿದ. ರೂಮ್ಸಣ್ಣದಾಗಿದ್ದರೂ 2500/- ಬೇರೆ ವಿಧಿಯಿಲ್ಲದೆ ಒಪ್ಪಿದೆ.ನಮ್ಮ ಇನ್ನೋರ್ವ ಗೆಳೆಯ ದುಬಾಯಿ ಯಿಂದಬರುವವನಿದ್ದ ಕಾರಣ 2 ರೂಮ್ ಪಡೆದೆವು.

ಆದರೆ ನಂತರ ತಿಳಿಯಿತು ಆ ರೂಮ್ ಗೆಹೆಚ್ಚೆಂದರೆ 1000/- ರೂಪಾಯಿ ಕೊಡಬಹುದುಎಂದು. ನಮ್ಮನ್ನು ಕರೆದುಕೊಂಡು ಬಂದ ಟ್ಯಾಕ್ಸಿಡ್ರೈವರ್ ನಾವು ರೂಮ್ ನೋಡಲು ಒಳಗೆಹೋದಾಗ ಹೋಟೇಲಿನವನೊಂದಿಗೆ 2500/- ಹೇಳುಎಂದು ಫಿಕ್ಸಿಂಗ್ ಮಾಡಿ, ಬಾಕಿ ಹಣವನ್ನು ತನ್ನಜೇಬಿಗಿಳಿಸಿ ಹೋಗಿದ್ದ. ಸಾಮಾನ್ಯವಾಗಿ ನಾನುಯಾವಾಗಲೂ ದೂರದೂರಿಗೆ ಪ್ರಯಾಣ ಹೊರಡುವಾಗ Booking.com/app ನಲ್ಲಿ ನಿರ್ದಿಷ್ಟ ಸ್ಥಳದ ಹೋಟೆಲ್ ಗಳ ಬೆಲೆಯನ್ನು ಪರೀಕ್ಷಿಸಿಮುಂಗಡವಾಗಿ ಕಾಯ್ದಿರಿಸುತ್ತಿದ್ದೆ. ಆದರೆ ಈ ಸಲಸಮಯದ ಅಭಾವದ ಕಾರಣ ಪರೀಕ್ಷಿಸಲಾಗಲಿಲ್ಲ. ಆಸಂದರ್ಭದಲ್ಲಿ ನನಗೆ ಈ app ನ ಮಹತ್ವ ತಿಳಿಯಿತು.

ಮರುದಿನ ಮಧ್ಯಾನ್ಹ 1:30 ಕ್ಕೆ ಹೋಟೆಲ್ಬಿಡುವಾಗ 2 ರೂಮ್ 2 ದಿನದ ಬಾಡಿಗೆ ಕೇಳಿದ.ನಾವು ಕೇವಲ 13 ಗಂಟೆ ಮಾತ್ರ ಉಳಿದುಕೊಂಡದ್ದು,ಅದಕ್ಕೆ ಎರಡು ದಿನದ ಬಾಡಿಗೆ ಯಾಕೆ ಎಂದು ಕೇಳಿದೆ.ಅದಕ್ಕವನು "ನೀವು ಯಾವುದೇ ಸಮಯದಲ್ಲಿಬಂದರೂ ಮಧ್ಯಾನ್ಹ 12 ಗಂಟೆ ಮೊದಲು ರೂಮ್ಖಾಲಿ ಮಾಡ್ಬೆಕು. ಇಲ್ಲಂದ್ರೆ ಮರುದಿನದ ಬಾಡಿಗೆಕಡ್ಡಾಯ ಪಾವತಿಸ ಬೇಕು. ಆಗ ನಾನುBooking.com/app ನ ಮೊರೆ ಹೋದಾಗ ಅದೇಪರಿಸರದಲ್ಲಿ ಇನ್ನೊಂದು ಉತ್ತಮ ಹೋಟೆಲ್ಲಭಿಸಿದಾಗ ಅದನ್ನೇ ರಿಸರ್ವ್ ಮಾಡಿ, ಅಲ್ಲಿಂದನಿರ್ಗಮಿಸಿದೆವು. ನಮಗೆ ಲಭಿಸಿದ ಹೋಟೆಲ್ವಿಶಾಲವಾಗಿಯೂ, ಸ್ವಚ್ಚವಾಗಿತ್ತು. ನಾವು 3 ಜನರಿಗೆಉಳಿದು ಕೊಳ್ಳಲು ಬಾಡಿಗೆ ಕೇವಲ 2800/-ರೂಪಾಯಿ ಮಾತ್ರ – Thanks to Booking.com/app

ನಮ್ಮ ಉದ್ದೇಶಿತ ಕಾರ್ಯವು 3 ದಿನ ವಿಳಂಭವಾದ ಕಾರಣ ಮರುದಿನ ಜಗತ್ತಿನ 7 ನೇ ಅಧ್ಭುತವಾದ ಆಗ್ರಾದ "ತಾಜ್ ಮಹಲ್" ನೋಡಲು7000/- ಪಾವತಿಸಿ ಬಾಡಿಗೆ ಕಾರು ನಿಗದಿಪಡಿಸಿ ಮುಂಜಾನೆ 6 ಗಂಟೆಗೆ ಹೊರಟೆವು. 4 ಗಂಟೆಗಳ ಪ್ರಯಾಣವಾದ ಕಾರಣ, ದಾರಿ ಮದ್ಯೆ ಕಾರು ಚಾಲಕ ಕೇಳಿದ "ಸಾರ್ ಚಹ, ತಿಂಡಿಗಾಗಿ ಮುಂದೆ ಒಂದು ಧಾಭಾವಿದೆ" ಎಂದ. ಅದರಂತೆ ಧಾಭಾದ ಒಳಗೆ ಹೋಗಿ ತಿಂಡಿಗಳ ದರ ಪಟ್ಟಿ ನೋಡಿ ದಂಗಾದೆವು. ಒಂದು ಪ್ಲೇಟ್ ಪೂರಿಗೆ 125/-, ಕೇವಲ ಒಂದು ಪರೋಟಕ್ಕೆ 40/-, ಚಹ 50/- ರೂಪಾಯಿ. ಊರಿನಲ್ಲಿ15 ರೂಪಾಯಿಗೆ ಸಿಗುವ ಬಿಸ್ಕಿಟ್ ಗೆ 170/- ಮುಂದಿನ ಧಾಭಾದಲ್ಲಿ ಅದೇ ಬಿಸ್ಕಿಟ್ ಗೆ 50/- ರೂಪಾಯಿ ಕೊಟ್ಟು ಖರೀದಿಸಿ ಮುಂದುವರಿದು ಒಂದು ಕ್ಯಾಂಟೀನ್ ನಲ್ಲಿ ಚಹ ತಿಂಡಿ ಮುಗಿಸಿದೆವು.

ನಂತರ ಆಗ್ರಾ ತಲುಪಿದಾಗ ತಾಜ್ ಮಹಲ್ ನ ಗೇಟ್ ನಲ್ಲಿ ಸೈಕಲ್ ರಿಕ್ಷಾದವ ಹೇಳಿದ " ಸಾರ್ ಇದು ಸರಕಾರಿ ಪ್ರಾಯೊಜಿತ ಸೈಕಲ್. ತಾಜ್ ಮಹಲ್ ಬಳಿಗೆ ಬಿಡಲು ಕೇವಲ 40/- ರೂಪಾಯಿ ಮಾತ್ರ" ಒಮ್ಮೆ ಸೈಕಲ್ ರಿಕ್ಷಾ ಏರಿದ ಮೇಲೆ, ಅಲ್ಲಿಯ ಪರಿಸರದ ಬಗ್ಗೆ ವಿವರಿಸಲು ತೊಡಗಿದ. ಕೊನೆಗೆ "ಸಾರ್ ಇಲ್ಲಿ ಒಂದು ಸರಕಾರಿ ಬಟ್ಟೆ ಅಂಗಡಿ ಇದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸೀರೆಗಳು. ಬಿದಿರನ್ನು ಎಳೆ ಎಳೆಯಾಗಿ ಬಿಡಿಸಿ, ಅದರಿಂದ ತಯಾರಿಸಿದ ಸೀರೆಗಳು. ಬಾಳೆ ದಿಂಡಿನ ಎಳೆಗಳಿಂದ ತಯಾರಿಸಿದ ಸೀರೆಗಳು. ನಯವಾಗಿಯೂ, ಅತೀ ಹಗುರವಾದ, ಇಸ್ತ್ರಿ ಹಾಕುವ ಅಗತ್ಯವಿಲ್ಲದ ಸೀರೆಗಳು. ಜೈಲಿನಲ್ಲಿರುವ ಕೈದಿಗಳಿಂದ ತಯಾರಿಸಲ್ಪಡುತ್ತದೆ. 5 ವರ್ಷ ವಾರಂಟಿಯೂ ಇದೆ. ಅದೂ ಅಲ್ಲದೆ 3-4 ವರ್ಷ ಉಪಯೊಗಿಸಿದ ನಂತರ ಹಿಂತಿರುಗಿಸಿದರೆ ಅರ್ಧ ಹಣ ವಾಪಸ್ ನೀಡುತ್ತಾರೆ. ಬೆಂಗಳೂರಿನಲ್ಲಿ ಇವರ ಶಾಖೆಗೆ ಹಿಂತಿರುಗಿಸ ಬಹುದು. ಅಲ್ಲಿ ಒಂದು ದಪ್ಪವಾದ ಹಾಗೂ ಹತ್ತಿಗಿಂತ ಹಗುರವಾದ ಚಾದರ ಸಿಗುತ್ತದೆ. ಚಳಿಗಾಲದಲ್ಲಿಯೂ ಉಪಯೊಗಿಸಿ, ಸೆಖೆಗಾಲದಲ್ಲಿ ಅದನ್ನೆ ತಿರುಗಿಸಿ ಹೊದ್ದು ಕೊಂಡರೆ ತಂಪಾಗಿರಿಸುತ್ತದೆ." ಹೀಗೆ ಹೇಳುತ್ತಾ ನಾನು ನಿಮ್ಮನ್ನು ಮೊದಲು ಅಲ್ಲಿಗೆ ಕರೆದು ಕೊಂಡು ಹೋಗುವೆ, ನಂತರ ತಾಜ್ ಮಹಲ್ ಗೆ ಕರೆದು ಕೊಂಡು ಹೋಗುವೆ ಎಂದ. ಅವನ ಮಾತಿಗೊಪ್ಪಿ ಆ ಅಂಗಡಿಗೆ ಭೇಟಿ ನೀಡಿ ಬಾಳೆ ದಿಂಡಿನ ಮತ್ತು ಬಿದಿರಿನ ೨ ಸೀರೆ ಹಾಗು ಒಂದು ಚಾದರ ಖರೀದಿಸಿ ಸೈಕಲ್ ಹತ್ತಿ ಕುಳಿತು ಚಾಲಕನಿಗಾಗಿ ಕಾಯುತಿದ್ದೆವು. ಅವನು ನಮ್ಮ ವ್ಯಾಪಾರದ ಮೊತ್ತಕ್ಕನುಗುಣವಾಗಿ ಕಮಿಶನ್ ಪಡೆಯಲು ಹೊಗಿದ್ದ ಎಂದು ನಂತರ ತಿಳಿಯಿತು. ಅಲ್ಲಿಂದ ತಾಜ್ ಮಹಲ್ ಕಡೆಗೆ ಹೊರಟೆವು.

ಟೂರಿಸ್ಟ್ ಗೈಡ್ ನ ಸಹಾಯ ಪಡೆಯುವುದು ಬೇಡವೆಂದು ಮೊದಲು ನಿರ್ಧರಿಸಿದ್ದೆವು. ಆದರೆ ತಾಜ್ ಮಹಲ್ ಪ್ರವೇಶಕ್ಕೆ 400-500 ಜನ ಕ್ಯೂ ನಿಂತಿದ್ದರು. ಆಗ ಅಲ್ಲಿಗೆ ಬಂದ ಗೈಡ್ ನಮಗೆ ಹೇಳ ತೊಡಗಿದ "ಸಾರ್ ಹೀಗೆ ಹೋದರೆ ಟಿಕೆಟ್ ಸಿಗುವಾಗ ಸಂಜೆಯಾಗುತ್ತದೆ. ನಾನು ನಿಮ್ಮನ್ನು ಕಾಯಿಸದೆ 5ನಿಮಿಷದಲ್ಲಿ VIP ಗೇಟ್ ಮುಖಾಂತರ ಒಳಗೆ ಕರೆದು ಕೊಂಡು ಹೋಗುವೆ. ನಿಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿ ಕೊಳ್ಳುವೆ. ಕೇವಲ450/- ರೂ ಕೊಡಿ ಎಂದ. ಅಲ್ಲಿರುವ ಕ್ಯೂ ನೋಡಿ ಅವನ ಮಾತಿನ ಮೇಲೆ ನಂಬಿಕೆ ಇರಲಿಲ್ಲ. ಆದರೂ ವಿಧಿಯಿಲ್ಲದೆ ಒಪ್ಪಿದೆವು. ಅವನು ತನ್ನ ಮಾತಿನಂತೆ ನಮ್ಮನ್ನು ಇಕ್ಕಟ್ಟಾದ ಓಣಿಗಳಲ್ಲಿ ಕರೆದು ಕೊಂಡು ಹೋಗಿ ಟಿಕೇಟ್ ಪಡೆದು 5 ನಿಮಿಷದಲ್ಲಿ ಹೊರಗಿನVIP ಗೇಟ್ ಮುಖಾಂತರ ಪ್ರವೇಶಿಸುವಂತೆ ಮಾಡಿದ. ಪರಿಸರವನ್ನು ಸುತ್ತಾಡಿಕೊಂಡು ತಾಜ್ ಮಹಲ್ ನ ಒಳಗೆ ಹೋಗಲು ಇನ್ನಷ್ಟು (100-150 ಜನರ) ಕ್ಯೂ ಇತ್ತು. ಆಗ "ಚಿಂತೆ ಮಾಡಬೇಡಿ, ಎರಡೇ ನಿಮಿಷದಲ್ಲಿ ನಾವು ಒಳಗೆ ಹೋಗುವಂತೆ ಮಾಡುವೆ" ಎಂದವನೇ ಸರತಿಯ ಸಾಲನ್ನು ದಾಟಿಸಿ, ತಟ್ಟನೆ ಒಳಗೆ ಹೊಗಲು ಅನುವು ಮಾಡಿ ಕೊಟ್ಟು, ಸವಿವರವಾಗಿ ಮಾಹಿತಿ ನೀಡಿದ ನಂತರ ಗೇಟ್ ನ ಹೊರಗಡೆ ನಮ್ಮ ಸೈಕಲ್ ರಿಕ್ಶಾದ ಬಳಿಗೆ ಬಿಟ್ಟ. ಅಲ್ಲಿಂದ ದೆಹಲಿಯ ನಮ್ಮ ಹೋಟೆಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಗೈಡ್ ನಿಂದಾಗಿ ನಮ್ಮ ಕೆಲಸ ತುಂಬಾನೆ ಸುಲಭವಾಯಿತು.

ದೆಹಲಿಗೆ (ಇತರ ಊರಿಗೂ ಅನ್ವಯ) ಪ್ರಯಾಣಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಿ.

· ಚಳಿಗಾಲದ ಸಮಯದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಥವ ಹತ್ತುವಾಗ ಸಾಧ್ಯವಾದಷ್ಟು 10 am ಗಂಟೆಯ ನಂತರದ ವಿಮಾನಗಳೊಂದಿಗೆ ವ್ಯವಹರಿಸಿ.ಏಕೆಂದರೆ,ಮಧ್ಯರಾತ್ರಿಯಿಂದ ಬೆಳ್ಳಗಿನವರೆಗೆ ದಟ್ಟವಾದ ಮಂಜು ಆವರಿಸಿರುವ ಕಾರಣ ವಿಮಾನ ವಿಳಂಬ(ಆಗುತ್ತದೆ)ವಾಗುವ ಸಾಧ್ಯತೆಗಳಿರುತ್ತವೆ.
· ಟ್ಯಾಕ್ಸಿಯನ್ನು ಪ್ರೀ ಪೈಡ್ ಕೌಂಟರ್ ನಿಂದಲೇ ಕಾಯ್ದಿರಿಸಿಕೊಳ್ಳಿ.
· ಹೋಟೆಲ್ ಕಾಯ್ದಿರಿಸಲು ಕೆಲವೊಂದು ಆಪ್ಲಿಕೆಶನ್ ಗಳು ಸ್ಮಾರ್ಟ್ ಫೊನ್ ಗಳಲ್ಲಿ ಲಭ್ಯವಿದೆ. ಹಾಗಾಗಿ ಪ್ರಯಾಣ ಹೊರಡುವ ಮೊದಲೇ ಅಂತಹ ಆಪ್ಲಿಕೆಶನ್ ಸಹಾಯದಿಂದ ತಮ್ಮ ಹೋಟೆಲ್ ಕೋಣೆಯನ್ನು ಕಾಯ್ದಿರಿಸಿಕೊಳ್ಳಿ. ಇಲ್ಲಾಂದ್ರೆ ದುಪಟ್ಟ ಹಣ ಕೊಡ ಬೇಕಾಗಿ ಬರಬಹುದು.
· ಕೆಲವು ಹೋಟೆಲ್ ಗಳಲ್ಲಿ ನೀವು ಪ್ರವೆಶಿಸಿದ ಕ್ಷಣದಿಂದ ನಿಮ್ಮ ಸಮಯ ಶುರುವಾಗಿ ಮರುದಿನ ಅದೇ ಸಮಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಕೆಲವು ಹೋಟೆಲ್ ಗಳಲ್ಲಿ 12pm ಗೆ ಕೋಣೆ ಬಿಡ ಬೇಕಾಗಿದೆ. ಅದರ ನಂತರ ಅರ್ಧ ಗಂಟೆ ಕಳೆದರೂ ಮರು ದಿನದ ಬಾಡಿಗೆಯನ್ನು ಪಾವತಿಸ ಬೇಕಾಗುತ್ತದೆ. ಹಾಗಾಗಿ ಇದನ್ನು ಮೊದಲೇ ಹೋಟೆಲ್ ನವರಿಂದ ಕೇಳಿ ತಿಳಿದು ಕೊಳ್ಳಿ.
· ತಾಜ್ ಮಹಲ್ ನಲ್ಲಿ ಗೈಡ್ ಪಡಕೊಂಡ್ರೆ ಒಳ್ಳೆದು. (ಅನುಭವದ ಮಾತು)
· ಚಳಿಗಾಲದಲ್ಲಿ ಹವಾಮಾನ 4 ಡಿಗ್ರಿಯವರೆಗೆ ಇಳಿಯುತ್ತದೆ. ಹಾಗಾಗಿ ಅದಕ್ಕೆ ತಕ್ಕುದಾದ ಬಟ್ಟೆ,ಕಾಲು ಚೀಲ, ಕೈ ಚೀಲ ಇತ್ಯಾದಿಗಳೊಂದಿಗೆ ಪ್ರಯಾಣಿಸಿ.
ದೆಹಲಿ ಪ್ರಯಾಣದಲ್ಲಿ ನನಗಾದ ಅನುಭವ ಹಾಗೂ ಪ್ರಯಾಣಿಕರಿಗೆ ಉಪಯೋಗವಾಗಲಿ ಎಂಬುದು ಈ ಲೇಖನ ಬರೆಯುವ ಉದ್ದೇಶ. ಹಾಗಾಗಿ ಈ ಲೇಖನ ಉಪಯುಕ್ತವಾಗಿದೆ ಎಂಬ ವಿಶ್ವಾಸದೊಂದಿಗೆ
ನಿಮ್ಮವನೇ ಆದ
ಅನಾಮಿಕ...

ಭವಿಷ್ಯದಲ್ಲಿ ಭಾರತ




ಭಾರತವು ಬಹು ಸಂಕೀರ್ಣತೆಯ ಮತ್ತು ಬಹು ಸಮಾಜದ ಗೊಂದಲಮಯ ದೇಶವಾಗಿದೆ. ಹಾಗೆಯೇ ವಿಶ್ವ ದಲ್ಲಿಯೇ ಅತಿ ಹೆಚ್ಚಿನ ಧರ್ಮಗಳನ್ನು ಹೊಂದಿದೆ. ನಮ್ಮ ದೇಶದ ನಿಜವಾದ ಸಮಸ್ಯೆ ಶಿಕ್ಷಣ, ನಿರುದ್ಯೋಗ, ಬಡತನವೇ ಹೊರತು ಮಂದಿರ, ಮಸೀದಿ, ಗೋವು ,ಹಂದಿ ಅಲ್ಲ ಅಂತ ಎಲ್ಲಿವರೆಗೆ ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಭಿವ್ರದ್ದಿ ಮರೀಚಿಕೆ ಮಾತ್ರ. ಧರ್ಮ, ಬಟ್ಟೆ , ಆಹಾರ ವೈಯುಕ್ತಿಕವಾದವುಗಳೇ ಹೊರತು ಸಾರ್ವತ್ರಿಕವಾಗಿ ಹೇರಲ್ಪಡುವಂತದ್ದು ಅಲ್ಲ.

ನಮ್ಮ ವೋಟು ಪಡೆದವರು ತಮ್ಮ ತೀಟೆಗಳಿಗೆ ಜನರ ನಡುವೆ ದ್ವೇಷ ಏರ್ಪಡಿಸಿ ಕೋಮು ದಳ್ಳುರಿಗೆ ಪ್ರಚೋದಿಸುತ್ತಿರುವಾಗ, ನಮ್ಮ ದೇಶದ ಇಂಚು ಇಂಚನ್ನು ಹಂತ ಹಂತವಾಗಿ ನಮಗೆ ಗೊತ್ತೇ ಆಗದ ಹಾಗೆ ಮಾರುತ್ತಿರುವಾಗ ನಾವು ಕುರುಡ ರಂತೆ ಅವರನ್ನು ಅಪ್ಪಿಕೊಂಡರೆ ನಮ್ಮ ನಾಶ ಖಂಡಿತ .ಹೀಗಾಗಿ ನಮ್ಮಲ್ಲಿನ ವಿವಿದತೆಯನ್ನು ಬದಿಗಿಟ್ಟು ಭಾರತ ರಕ್ಷಣೆಗೆ ನಾವೆಲ್ಲಾ ಒಂದಾಗಿ ನಮ್ಮ ಶಕ್ತಿಯನ್ನು ದುಪ್ಪ
ಟ್ಟು ಗೊಳಿಸಿಕೊಳ್ಳಳು ಪ್ರಯತ್ನಿಸದಿದ್ದರೆ ಭವಿಷ್ಯದಲ್ಲಿ ಅಧಃಪತನಕೀಡಾಗುವ ಅಪಾಯವಿದೆ.

ನಮ್ಮ ನಡೆ-ನುಡಿ, ವೇಷ -ಭೂಷಣ, ಆಚಾರ-ವಿಚಾರ, ಆಹಾರ-ವಿಹಾರದ ವಿವಿಧತೆಯಲ್ಲಿಯೂ ಕೂಡ ಏಕತೆಯನ್ನು ಒಪ್ಪಿಕೊಂಡಿರುವ ನಾವು ಸಂಕುಚಿರಾಗದೆ, ನಮ್ಮ ಅನನ್ಯತೆಯನ್ನು ಮೆಚ್ಚಿಕೊಂಡು ಮುನ್ನಡೆದರೆ ಮಾತ್ರ ದೇಶ ವಿಕಾಶದ ಕನಸು ನನಸಾಗಲು ಸಾದ್ಯ. ಭವಿಷ್ಯದ ಭಾರತದ ಅಬಿವ್ರದ್ದಿಗೆ ಹೊಸ ದೃಷ್ಟಿಕೋನದ ಅಗತ್ಯವಿದ್ದು ಅಂತ ಹೊಸ ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಿದೆ.ಎಲ್ಲ ಧರ್ಮದವರೂ ಸಮಾನವಾಗಿ ಎದುರಿಸಬೇಕಾದ ಸಮಸ್ಯೆಗಳಾದ ಶಿಕ್ಷಣ, ನಿರುದ್ಯೋಗ, ಬಡತನದ ವಿರುದ್ದ ಹೋರಾಡಬೇಕೆ ಹೊರತು ಪರಸ್ಪರ ಗುದ್ದಾಡುವುದು ಅಲ್ಲ. ದೇಶದ ಹಿತಾಶಕ್ತಿಯಿಂದ ನಮ್ಮೊಳಗಿನ ವೈಷಮ್ಯ ತೊರೆದು ಒಂದಾಗಬೇಕಿದೆ. ತನ್ಮೂಲಕ ಸಾಮಾನ್ಯ ಭಾರತೀಯರ ಹೆಬ್ಬಯಕೆಗಳನ್ನು ಈಡೇರಿಸಲು ಮತ್ತು ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಚಿಂತಕರು ,ಸಮಾಜ ಸುದಾರಕರು ಮುಂದೆ ಬರಬೇಕಾಗಿದೆ.

ಅಭಿವ್ರದ್ದಿಯ ಕಡೆಗೆ ನಡೆಸಬಲ್ಲ ಅಂಥ ನಡೆಯನ್ನು ವಿಶಾಲ ಮನಸ್ಸಿನಿಂದ ಒಪ್ಪಿಕೊಂಡರೆ ಭವಿಷ್ಯದಲ್ಲಿ ಭಾರತ ನಂಬರ್ ಒನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

- ಉಫಾಕು